ಡಿವಿಜಿ ಸುದ್ದಿ, ದಾವಣಗೆರೆ: ಹರಿಹರದ ವೀರಶೈವ ಪಂಚಮಸಾಲಿ ಮಠದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಬೆಳ್ಳಿ ಬೆಡಗು ಮತ್ತು ಪ್ರಥಮ ಹರ ಜತ್ರಾ ಮಹೋತ್ಸವಕ್ಕೆ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮೀಜಿ ಚಾಲನೆ ನೀಡಿದರು.
ಜಾತ್ರಾ ಮಹೋತ್ಸವಕ್ಕೆ ಜನ ಸಾಗರವೇ ಹರಿದು ಬಂದಿತ್ತು. ದಾವಣಗೆರೆ ಜಿಲ್ಲೆ ಸೇರಿದಂತೆ ಸುತ್ತಮುತ್ತ ಜಿಲ್ಲೆಯ ಭಕ್ತಾದಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ನಂತರ ಮಾತನಾಡಿದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮೀಜಿ, ಇದೊಂದು ಯುವಕ ಸಮಾವೇಶ. ಇಂತಹ ಸಮಾವೇಶಗಳ ಮೂಲಕ ಯುವ ಸಮೂಹ ಸಂಘಟಿರಾಗಬೇಕು. ಯುವಕರು ದೈಹಿಕ, ಮಾನಸಿಕವಾಗಿ ಸಧೃಡವಾಗಿದ್ದಾಗ ಸುಂದರವಾದ ದೇಶ ಕಟ್ಟಲು ಸಾಧ್ಯ. ಜತೆಗೆ ಯುವಕರಲ್ಲಿ ನಿರಂತರ ಪರಿಶ್ರಮ ಅತ್ಯಗತ್ಯ ಎಂದರು.
ಯುವ ಸಮೂಹ ತಮ್ಮಲ್ಲಿನ ಶಕ್ತಿ, ಸಾಮಾರ್ಥ್ಯವನ್ನು ಲೋಕ ಕಲ್ಯಾಣಕ್ಕೆ ಲೇಪನ ಮಾಡಬೇಕು. ಈ ಮೂಲಕ ಜೈ ಜವಾನ್ ಜೈ ಕಿಸಾನ್ ಘೋಷ ವಾಕ್ಯದೊಂದಿಗೆ ಸುಂದರ ದೇಶ ಕಟ್ಟಬೇಕು. ದೇಶ ಕಟ್ಟುವುದು ಮಾತ್ರವಲ್ಲದೆ, ದೇಶ ರಕ್ಷಣೆಗೂ ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಆರ್ಟ್ ಆಫ್ ಲಿವಿಂಗ್ ಆಶ್ರಮ ಶ್ರೀ ರವಿಶಂಕರ್ ಗುರೂಜೀ ಮಾತನಾಡಿ, ವೀರ-ಶೌರ್ಯಕ್ಕೆ ಹೆಸರಾದ ಪಂಚಮಸಾಲಿ ಸಮಾಜದ ಕಿತ್ತೂರು ರಾಣಿ ಚೆನ್ನಮ್ಮ ಸಮಾಜದ ಹೆಮ್ಮೆ. ಇಂತಹ ಸಮಾಜದ ನೇತೃತ್ವ ವಹಿಸಿಕೊಂಡಿರುವ ವಚನಾನಂದ ಶ್ರೀಗಳು ಯುವ ಸಾನ್ಯಾಸಿ, ತಮ್ಮ ಯೋಗಾಸನದ ಮೂಲಕವೇ ವಿಶ್ವ ವಿಖ್ಯಾತಿ ಪಡೆದವರು. ಇಂತಹ ಉತ್ಸಾಹಿ ಸನ್ಯಾಸಿಗಳ ಅವಶ್ಯಕತೆ ದೇಶಕ್ಕೆ ಇದೆ. ವಚನನಾಂದ ಶ್ರೀಗಳು ಕೇವಲ ಯೋಗದ ಜೊತೆ ಸಮಾಜ, ಸಮಾಜದ ನಡುವೆ ಬೆಸುಗೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು
ಸುಖ ಜೀವನವನ್ನು ಅರ್ಥಿಕ ಉನ್ನತಿಯಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ. ವಿದೇಶದಲ್ಲಿ ಶೇ30 ರಿಂದ40 ರಷ್ಟು ಜನರಲ್ಲಿ ಹಣವಿದ್ದರೂ, ನೆಮ್ಮದಿ ಇಲ್ಲ. ಹೀಗಾಗಿ ಭಕ್ತಿ, ಭಾವ, ಆಧ್ಯಾತ್ಮ, ಧ್ಯಾನ, ಯೋಗ , ಪ್ರಯೋಗ, ಉದ್ಯೋಗದಿಂದ ನೆಮ್ಮದಿ ಜೀವನ ಸಾಗಿಸಲು ಸಾಧ್ಯವಿದೆ ಎಂದರು.

ಗಾಳಿ ಎಲ್ಲಾ ಕಡೆ ಇದ್ದಾಗಲೂ ಕೆಲವು ಕಡೆ ಫ್ಯಾನ್ ಅವಶ್ಯಕತೆ ಇರುತ್ತದೆ. ಅದೇ ರೀತಿ ಪರಮಾತ್ಮ ಎಲ್ಲಾ ಕಡೆ ಇದ್ದಾಗಲೂ, ಮಠ ಮಂದಿರಗಳಲ್ಲಿ ಅಧ್ಯಾತ್ಮಿಕ ಶಕ್ತಿ ಅಡಗಿರುತ್ತದೆ. ಇನ್ನು ಭಕ್ತಿಯಲ್ಲಿ ವಿಶ್ವಾಸವಿದ್ದಾಗ ನಿಮ್ಮ ಜೀವನ ಉತ್ಸಾಹಭರಿತವಾಗಿರುತ್ತದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಸೂರ್ಯ ದಿಕ್ಕು ಬದಲಿಸುವ ಸಂಕ್ರಾತಿ ಸಂಭ್ರಮದಲ್ಲಿ ಪ್ರಥಮ ಹರ ಜಾತ್ರಾ ಮಹೋತ್ಸವದ ಮೂಲಕ ಶ್ರೀ ವಚನನಾಂದ ಸ್ವಾಮೀಜಿಗಳು ಪಂಚಮಸಾಲಿ ಸಮಾಜಕ್ಕೆ ಹೊಸ ದಿಕ್ಕು ನೀಡಲು ಹೊರಟಿದ್ದಾರೆ. ಭಾರತ ನೆಲದ ವೈಶಿಷ್ಟ್ಯ ವಿರುವುದೇ ಆಧ್ಯಾತ್ಮದಲ್ಲಿ ಆಧ್ಯಾತ್ಮದಲ್ಲಿ, ಇಂತಹ ಆದ್ಯಾತ್ಮದ ಜೊತೆ ಯೋಗಾಸನ ಮೂಲಕ ಸಮಾಜವನ್ನು ಶ್ರೀಗಳು ಮುನ್ನಡೆಸುತ್ತಿದ್ದಾರೆ ಎಂದರು.
ಸಮಾಜ ಸಮಾಜದ ನಡುವೆ ದ್ವೇಷ, ಅಸೂಯೆ ತುಂಬಿರುವ ಈ ಹೊತ್ತಿನಲ್ಲಿ ಯೋಗಾಸನ ಅವಶ್ಯಕತೆ ಇದೆ. ಎಷ್ಟೇ ಆಸ್ತಿ ದುಡ್ಡು ಇದ್ದರೂ, ಸುಖ ಸಿಗುವುದಿಲ್ಲ. ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲಸಲು ಆಧ್ಯಾತ್ಮದಿಂದ ಮಾತ್ರ ಸಾಧ್ಯ ಎಂದರು.