ಡಿವಿಜಿ ಸುದ್ದಿ, ದಾವಣಗೆರೆ: ನಗರದ ಭಾರತ್ ಕಾಲೋನಿ ರಸ್ತೆಯಲ್ಲಿನ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯ ಪುಷ್ಪ ಹರಾಜು ಕೇಂದ್ರಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್, ಪುಷ್ಟ ಹರಾಜು ಕೇಂದ್ರಕ್ಕೆ ಈ ಹಿಂದೆ ಹೋಲ್ಸೇಲ್ ಪುಷ್ಪ ಮಾರುಕಟ್ಟೆಯನ್ನು ಶಿಫ್ಟ್ ಮಾಡಿದಾಗ ಕೆಲವು ಮಾರಾಟಗಾರರು ಪುಷ್ಪ ಕೇಂದ್ರಕ್ಕೆ ಬಂದರು. ಇನ್ನು ಕೆಲವರು ಅಲ್ಲಿಯೇ ಉಳಿದರು. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಒಂದು ವಾರದಲ್ಲಿಯೇ ಇಲ್ಲಿಗೆ ಶಿಫ್ಟ್ ಮಾಡಿ ಎಲ್ಲ ಹೂವಿನ ವ್ಯಾಪಾರ ಇಲ್ಲಿಯೇ ನಡೆಯುವಂತೆ ನೋಡಿಕೊಳ್ಳಲಾಗುವುದು. ಹಣ್ಣಿನ ಕೇಂದ್ರವೂ ಪಕ್ಕದಲ್ಲಿಯೇ ಇರುವುದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಪುಷ್ಟ ಹರಾಜು ಕೇಂದ್ರದಲ್ಲಿ ಸಾಕಷ್ಟು ವಿಶಾಲವಾದ ಜಾಗವಿದೆ. ಆದರೆ ಇಲ್ಲಿ ಇರುವ ದೊಡ್ಡ ಚರಂಡಿಯಿಂದ ಕೆಟ್ಟ ವಾಸನೆ ಬರುತ್ತದೆ ಎಂಬುದರ ಬಗ್ಗೆ ವ್ಯಾಪಾರಸ್ಥರ ದೂರುಗಳಿದ್ದು, ನನಗೂ ಅದೇ ಅಭಿಪ್ರಾಯವಿದೆ. ಅದನ್ನು ಸರಿಪಡಿಸಿ ಅವರಿಗೆ ಬೇಕಾದ ಸೌಲಭ್ಯ ಒದಗಿಸಿಕೊಡಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಲಾಗಿದ್ದು, ಇನ್ನೊಂದು ವಾರದಲ್ಲಿ ಶಿಫ್ಟ್ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಅತ್ಯಂತ ಸುಸಜ್ಜಿತವಾದ ಪುಷ್ಪ ಹರಾಜು ಕೇಂದ್ರ ಒದಗಿಸಲಾಗಿದೆ. ಇದರಲ್ಲಿ ರೈತರಿಗೆ ವಿಶ್ರಾಂತಿ ಕೊಠಡಿ, ಕ್ಯಾಂಟೀನ್ ಹಾಗೂ ಕೋಲ್ದ್ ಸ್ಟೋರೇಜ್ನಿಂದ ಹಿಡಿದು ಬೇಕಾದ ಎಲ್ಲ ವ್ಯವಸ್ಥೆ ಇಲ್ಲಿದೆ. ಸಾಕಷ್ಟು ವಿಸ್ತಾರವಾದ ಜಾಗವೂ ಇದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಹೋಲ್ಸೇಲ್ ಪುಷ್ಪ ಮಾರುಕಟ್ಟೆಯನ್ನು ಶಿಫ್ಟ್ ಮಾಡಲಾಗುವುದು.
ಇಲ್ಲಿ ಬಿಟ್ಟು ಬೇರೆ ಎಲ್ಲಿಯೂ ಮಾರಾಟ ಮಾಡಲು ಅವಕಾಶ ಮಾಡಿಕೊಡುವುದಿಲ್ಲ. ಜೊತೆಗೆ ಹಣ್ಣು ಮತ್ತು ಹೂವಿನ ಮಾರುಕಟ್ಟೆ ಒಂದೆಡೆ ಇರುವುದರಿಂದ ಹೂ, ಹಣ್ಣು ಕೊಳ್ಳುವವರಿಗೆ ತುಂಬಾ ಅನುಕೂಲವಾಗಲಿದ್ದು, ಈ ಭಾಗವೂ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದರು.
ರೂ. 2.50 ಕೋಟಿ ಖರ್ಚು ಮಾಡಿ ಸುಮಾರು 7 ರಿಂದ 8 ಎಕರೆ ಜಾಗದಲ್ಲಿ ಮಾಡಿರುವ ಈ ಮಾರುಕಟ್ಟೆ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು. ಹಾಗೆಯೇ ಬಿಡಬಾರದು ಎಂಬ ದೃಷ್ಟಿಯಿಂದ ಎಲ್ಲಾ ಹೋಲ್ಸೇಲ್ ಪುಷ್ಪ ಮಾರಾಟಗಾರರಿಗೆ ಮನವರಿಕೆ ಮಾಡಿಕೊಡಲಾಗಿದೆ. ಒಬ್ಬರು, ಇಬ್ಬರು ಮಾತ್ರ ಚರಂಡಿ ವಾಸನೆ ಬರುತ್ತದೆ ಎಂದು ಹೇಳಿದ್ದಾರೆ. ಈ ಕುರಿತು ಈಗಾಗಲೇ ಸಂಸದರು ನಿರ್ದೇಶನ ನೀಡಿದ್ದಾರೆ. ಚರಂಡಿ ಸಮಸ್ಯೆ ಬಗೆಹರಿಸಿ ಅವರಿಗೆ ಬೇಕಾದ ಸೌಲಭ್ಯ ಒದಗಿಸಲು ಸೂಚನೆ ನೀಡಿದ್ದಾರೆ. ಆ ಪ್ರಕಾರ ಕೂಡಲೇ ಕ್ರಮ ಕೃಗೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನಾರ್, ಎಪಿಎಂಸಿ ಕಾರ್ಯದರ್ಶಿ ಪ್ರಭು ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.



