ಡಿವಿಜಿ ಸುದ್ದಿ, ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಕೈಬಿಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಾಯಕೊಂಡದ ನಾಡ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಭೂಮಿ ಕಾಯ್ದೆ ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ಅನುಕೂಲಕ್ಕಿಂತ ಅನಾನೂಕೂಲ ಹೆಚ್ಚು. ಸರ್ಕಾರದ ಈ ನಿರ್ಧಾರದಿಂದ ಕಾರ್ಪೋರೇಟ್ ವಲಯಕ್ಕೆ ಅನುಕೂಲವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬ ವ್ಯಕ್ತಿ 423 ಎಕರೆ ಜಮೀನು ಹೊಂದಲು ಈ ಕಾಯ್ದೆ ರೂಪಿಸಿದೆ. ಗ್ರಾಮೀಣ ಭಾಗದ ಮತ ಪಡೆದ ಸರ್ಕಾರಗಳು ಶ್ರೀಮಂತರ ಹಿತ ಕಾಯುವ ಗುರಿ ಹೊಂದಿವೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿಯಲ್ಲಿ ನೂರಾರು ವರ್ಷಗಳಿಂದ ರೈತರಿಗೆ ಪರಿಚಯವಿರುವ ವ್ಯಕ್ತಿಗಳು ವ್ಯವಹಾರ ವಹಿವಾಟು ಮಾಡುತ್ತಿದ್ದು, ರೈತರು ಮೋಸ ಹೋಗುವ ಪ್ರಮೇಯವಿಲ್ಲ ಎಂದರು.
ವಿದ್ಯತ್ ಸರಬರಾಜು ಮತ್ತು ಉತ್ಪನ್ನ, ವಿತರಣಾ ಘಟಕಗಳು ಈ ಮೊದಲು ಸರ್ಕಾರದ ಅಧೀನದಲ್ಲಿತ್ತು. ಈಗ ಕಾರ್ಪೋರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಕಾಯ್ದೆ ತಂದಿದೆ. ಈ ಕಾಯ್ದೆಯಿಂದ ಮುಂದೆ ರೈತರು ಪಂಪ್ ಸೆಟ್ ಗಳನ್ನು ಬಳಸಿ, ಒಕ್ಕಲುತನ ಮಾಡುವುದು ಅಸಾಧ್ಯವಾಗಿದೆ. ಕೂಡಲೇ ಈ ಕಾಯ್ದೆ ಹಿಂಪಡೆಯ ಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಬ್ಬಳ ಕೆ.ಎಸ್ ಪ್ರಸಾದ್, ಚಿಕ್ಕನಹಳ್ಳಿ ರೇವಣ್ಣ, ಬಲ್ಲೂರು ರವಿಕುಮಾರ್, ಪಾಮೇನಹಳ್ಳಿ ಲಿಂಗರಾಜ್, ಆನಗೋಡು ಭೀಮಣ್ಣ, ಚಿನ್ನಸಮುದ್ರ ಭೀಮಾನಾಯ್ಕ್, ಮಾಯಕೊಂಡ ನಿಂಗಣ್ಣ, ಪರಶುರಾಮರೆಡ್ಡಿ, ಅಣಬೇರು ಕುಮಾರಸ್ವಾಮಿ ಮತ್ತಿತರರಿದ್ದರು.



