ಡಿವಿಜಿ ಸುದ್ದಿ, ದಾವಣಗೆರೆ: ಚುಮು ಚುಮು ಚಳಿಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಪಾಲಿಕೆ ಆಯುಕ್ತರು, ಅಧಿಕಾರಿಗಳು ಸ್ವಚ್ಛತಾ ಕಾರ್ಯದಲ್ಲಿಭಾಗಿಯಾಗಿದ್ದು ಸಾರ್ವಜನಿಕರಿಗೆ ಅಚ್ಚರಿ ಮಾಡಿಸಿತ್ತು. ವಾಕಿಂಗ್ ಬಂದವರೆಲ್ಲ ಜಿಲ್ಲಾಡಳಿತದ ಕಾರ್ಯಕ್ಕೆ ಕೈಜೋಡಿಸಿ ಸ್ವಚ್ಚತ ಕಾರ್ಯಕ್ಕೆ ಇನ್ನಷ್ಟು ಮೆರುಗು ನೀಡಿದರು.
ನಗರದ ಆಕರ್ಷಕ ಬಿಂದುವಾದ ಕುಂದುವಾಡ ಕೆರೆ ಸುತ್ತಲಿನ ಸ್ವಚ್ಛತಾ ಕಾರ್ಯಕ್ಕೆ ಇವತ್ತು ಸ್ವತಃ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರೇ ಆಗಮಿಸಿದ್ದರು. ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗಿ ಸಾರ್ವಜನಿಕರಲ್ಲಿ ನಮ್ಮ ಸುತ್ತಮುತ್ತಲಿನ ಕೆರೆ ಸ್ವಚ್ಚತೆ ಬಗ್ಗೆ ಅರಿವುಮೂಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಮಹಾನಗರಪಾಲಿಕೆ ಸಹಯೋಗದೊಂದಿಗೆ ಕುಂದುವಾಡ ಕೆರೆ ಪ್ರದೇಶದಲ್ಲಿ ಬೆಳಿಗ್ಗೆ 6 ಗಂಟೆಗೆ ನಮ್ಮ ನಗರ-ನಮ್ಮ ಕೆರೆ ಸ್ವಚ್ಚತಾ ಆಂದೋಲನಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ ನೀಡಿದರು.
ನಾವು ನಮ್ಮ ಸುತ್ತಮುತ್ತ ಬಯಸುವ ಬದಲಾವಣೆ ಮೊದಲು ನನ್ನಲ್ಲಿ ಆಗಬೇಕು. ಆಗ ಮಾತ್ರ ಧನಾತ್ಮಕ ಬದಲಾವಣೆ ಸಾಧ್ಯ. ನಾಗರಿಕ ಮಿತ್ರರಾದ ನಾವೆಲ್ಲ ನಮ್ಮ ಮನೆ ಸುತ್ತಮುತ್ತ ವಾತಾರವಣ ಸ್ವಚ್ಚವಾಗಿಟ್ಟುಕೊಳ್ಳುವ, ಚರಂಡಿ ಇತರೆ ಸ್ವಚ್ಚವಾಗಿಟ್ಟುಕೊಳ್ಳುವ ಸಂಕಲ್ಪ ತೊಡಬೇಕು. ಆಗ ಇಡೀ ನಗರ ಸ್ವಚ್ಚವಾಗಿ ಕಂಗೊಳಿಸುತ್ತದೆ ಎಂದರು.

ನಾವು ಎಷ್ಟು ಕಸಸಂಗ್ರಹಿಸಿದ್ದೇವೆ ಎನ್ನುವುದಕಿಂತ ಎಷ್ಟು ಹಸಿರು ಸೃಷ್ಠಿಸಿದ್ದೇವೆ ಎನ್ನುವುದು ಮುಖ್ಯ. ಪ್ರತಿಯೊಬ್ಬರು ನಿಮ್ಮ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿ ಇಟ್ಟುಕೊಳ್ಳಿ. ಸಾರ್ವಜನಿಕರು ಮನಸ್ಸುಮಾಡಿದರೆ, ಇಂತಹ10 ಕೆರೆಗಳನ್ನು ಸ್ವಚ್ಚಗೊಳಿಸಬಹುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಜಿಲ್ಲಾಡಳಿತ, ಸ್ವಚ್ಚತಾ ಕಾರ್ಯ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ. ನಿರಂತರವಾಗಿ ನಡೆಯುವಂತಹ ಕೆಲಸ. ಆಸಕ್ತರೆಲ್ಲರೂ ದಿನವೂ ತಮ್ಮ ಶ್ರಮದಾನ ಮಾಡಬಹುದು. ಕುಂದುವಾಡ ಕೆರೆ ಸುತ್ತ ಉತ್ತಮ ಗಿಡ ಮರಗಳಿದ್ದು ಮೈಕ್ರೋ ಪರಿಸರ ಏರ್ಪಟ್ಟಿದೆ. ಇದು ಮನಸ್ಸಿಗೆ ಚೇತೋಹಾರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮದಾನದ ಮೂಲಕ ನಮ್ಮ ನಗರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳೋಣ ಎಂದು ಹೇಳಿದರು.
ಸ್ವಚ್ಚತಾ ಆಂದೋಲನದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪಾಲಿಕೆ, ದೂಡಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ವಾಯುವಿಹಾರ ಬಳಗದವರು, ಸಾರ್ವಜನಿಕರು ಪಾಲ್ಗೊಂಡಿದ್ದರು.



