Connect with us

Dvgsuddi Kannada | online news portal | Kannada news online

ಮೈಸೂರು, ದಾವಣಗೆರೆಯಲ್ಲಿ ಹಕ್ಕಿಜ್ವರ ಪತ್ತೆ;  ವೈಜ್ಞಾನಿಕವಾಗಿ ಕೋಳಿ ನಾಶಕ್ಕೆ ಕ್ರಮ: ಸಚಿವ ಪ್ರಭು ಚವ್ಹಾಣ್

ಪ್ರಮುಖ ಸುದ್ದಿ

ಮೈಸೂರು, ದಾವಣಗೆರೆಯಲ್ಲಿ ಹಕ್ಕಿಜ್ವರ ಪತ್ತೆ;  ವೈಜ್ಞಾನಿಕವಾಗಿ ಕೋಳಿ ನಾಶಕ್ಕೆ ಕ್ರಮ: ಸಚಿವ ಪ್ರಭು ಚವ್ಹಾಣ್

ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ಭೀತಿ ಬೆನ್ನಲ್ಲೇ ಇದೀಗ ದಾವಣಗೆರೆ ಮತ್ತು ಮೈಸೂರಿನಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು, ಈ ಹಕ್ಕಿ ಜ್ವರ ಜನರಲ್ಲಿ ಮತ್ತಷ್ಟು ಆತಂಕ ಉಂಟು ಮಾಡುವಂತೆ ಮಾಡಿದೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬನ್ನಿಕೋಡ ಗ್ರಾಮದಲ್ಲಿ  1,167 ನಾಟಿ ಕೋಳಿ, ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 4, 500  ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಇವುಗಳನ್ನು ವೈಜ್ಞಾನಿಕ  ರೀತಿಯಲ್ಲಿ ನಾಶ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ  ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಜಿಲ್ಲೆಯ ಹರಿಹರ ತಾಲ್ಲೂಕಿನ ಬನ್ನಿಕೋಡ ಗ್ರಾಮ, ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ಕುಂಬಾರಕೊಪ್ಪಲು ಗ್ರಾಮಗಳಿಂದ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ  ವಿಶ್ಲೇಷಣೆಗೆ ಸಲ್ಲಿಸಲಾದ ಮಾದರಿಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದ್ದು, ಹೆಚ್ಚಿನ ತಪಾಸಣೆಗಾಗಿ ನಿಯಮದಂತೆ ಭೂಪಾಲದ (NIHSAD) ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಯೂ ಸಹ ಹಕ್ಕಿ ಜ್ವರ ಅಥವಾ ಕೋಳಿ ಶೀತ ಜ್ವರದ ವೈರಾಣು ಹೆಚ್5ಎನ್1 ಸೋಂಕು ಇರುವುದು ದೃಢಪಟ್ಟಿರುತ್ತದೆ.  ಕೇಂದ್ರ ಸರ್ಕಾರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಿಂದ ಅಧಿಕೃತವಾಗಿ ಆದೇಶವನ್ನು ಸಹ ನೀಡಿದೆ.

ರೋಗಪೀಡಿತ ವಲಯ ಘೋಷಣೆ :

ಕೇಂದ್ರ ಸರ್ಕಾರದ ಕೋಳಿ ಶೀತ ಜ್ವರ ನಿಯಂತ್ರಣ ಮತ್ತು ತಡೆಗಟ್ಟುವ ಮಾರ್ಗಸೂಚಿಗಳ ಅನ್ವಯ ರೋಗೋದ್ರೇಕ ಕಾಣಿಸಿಕೊಂಡಿರುವ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬನ್ನಿಕೋಡ ಗ್ರಾಮ ಹಾಗೂ ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ಕುಂಬಾರಕೊಪ್ಪಲು ಗ್ರಾಮಗಳ ಒಂದು ಕಿ.ಮೀ ವ್ಯಾಪ್ತಿಯಲ್ಲಿನ ಪ್ರದೇಶವನ್ನು ರೋಗಪೀಡಿತ ವಲಯ ಎಂದು ಹಾಗೂ 1 ರಿಂದ 10 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಿ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ.

ವೈಜ್ಞಾನಿಕವಾಗಿ 2 ಮೀಟರ್ ಉದ್ದ, ಅಗಲ ಹಾಗೂ 2 ಮೀ ಆಳದ ಗುಂಡಿ ತೆಗೆದು ಕೋಳಿಗಳನ್ನು ಹೂಳಲಾಗುತ್ತದೆ. ಈ ಸಂದರ್ಭದಲ್ಲಿ ಸುಣ್ಣ ಮತ್ತು ಮಣ್ಣನ್ನು ಪದರುಗಳಲ್ಲಿ ಹಾಕಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ನಾಶ ಮಾಡಲಾದ ಸ್ಥಳದಲ್ಲಿ 3 ತಿಂಗಳ ಕಾಲ ನಿರ್ಧಾರಿತ ಸೋಂಕು ಪ್ರದೇಶದಲ್ಲಿ ಯಾವುದೇ ಕುಕ್ಕುಟ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಸೋಂಕಿತ ಪ್ರದೇಶದಲ್ಲಿ 3 ತಿಂಗಳವರೆಗೆ ಸರ್ವೇಕ್ಷಣಾ ಕಾರ್ಯ ನಡೆಯಲಿದೆ.

chikkan

ಪರಿಹಾರ : ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸೋಂಕು ಹಿನ್ನೆಲೆಯಲ್ಲಿ ನಾಶಗೊಳಿಸಿದ ಕೋಳಿಗಳಿಗೆ ಪರಿಹಾರ ಸಹ ನೀಡಲಾಗುತ್ತದೆ. 8 ವಾರದ ಒಳಗಿನ ಮೊಟ್ಟೆ ನೀಡುವ ಪ್ರತಿ ಕೋಳಿಗೆ ರೂ.20 ಹಾಗೂ 8 ವಾರ ಮೇಲ್ಪಟ್ಟ ಕೋಳಿಗೆ ರೂ.90 ನೀಡಲಾಗುವುದು. ಅದರಂತೆ ಮಾಂಸದ ಕೋಳಿಗಳಿಗೆ 6 ವಾರದ ಒಳಗಿನವುಗಳಿಗೆ ರೂ.20 ಹಾಗೂ 6 ವಾರ ಮೇಲ್ಪಟ್ಟ ಮಾಂಸದ ಕೋಳಿಗೆ ರೂ.70 ನೀಡಲಾಗುತ್ತದೆ.
ಸೋಂಕು ತಗುಲಿದ ವ್ಯಾಪ್ತಿಯಲ್ಲಿ ಲಭ್ಯವಿರುವ ಮೊಟ್ಟೆಗಳನ್ನು ಸಹ ನಾಶ ಮಾಡಲು ಕ್ರಮ ವಹಿಸಲಾಗುತ್ತಿದೆ. ಪ್ರತಿ ಮೊಟ್ಟೆಗೆ ರೂ.3 ರಂತೆ ಕುಕ್ಕುಟ ಆಹಾರಕ್ಕೆ ಪ್ರತಿ 1 ಕೆ.ಜಿ.ಗೆ ರೂ.12 ರಂತೆ ಪರಿಹಾರ ನೀಡಲಾಗುವುದು.

ದಾವಣಗೆರೆ ಮತ್ತು ಮೈಸೂರಿನಲ್ಲಿ ಸುಮಾರು 1,0167 ಕೋಳಿಗಳನ್ನು ವೈಜ್ಞಾನಿಕವಾಗಿ ನಾಶ(ಕಿಲ್ಲಿಂಗ್) ಮಾಡಲಾಗುತ್ತದೆ. ಕೊರೊನಾ ಭೀತಿಯಿಂದ ಕೋಳಿ ಮಾಂಸದ ಸೇವನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ಕೋಳಿ ಸಾಕಾಣಿಕೆ ಮತ್ತು ಮಾರಾಟದ ವೆಚ್ಚದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದ್ದು ಮುಂದಿನ ನಷ್ಟವನ್ನು ತಪ್ಪಿಸಲು ಅನೇಕ ಫಾರಂ ಮಾಲೀಕರು ಕೋಳಿಗಳನ್ನು ಸ್ವ ಇಚ್ಚೆಯಿಂದ ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದಾರೆ. ಇವುಗಳಿಗೆ ಯಾವುದೇ ರೀತಿಯ ಪರಿಹಾರ ಸರ್ಕಾರದಿಂದ ದೊರೆಯುವುದಿಲ್ಲವೆಂದು ಪಶುಸಂಗೋಪನೆ ಸಚಿವರಾದ ಪ್ರಭು ಚವ್ಹಾಣ್  ತಿಳಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top