ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ಸೋಂಕು ತಡೆಗೆ ಮುಖ್ಯಮಂತ್ರಿಗಳು ಇನ್ನಷ್ಟು ಬಿಗಿ ನಿಲುವು ತಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ನಂತರ ಮಾತನಾಡುದ ಅವರು, ಹೊರ ರಾಜ್ಯಗಳಿಂದ ಬರುವವರನ್ನು ಕಡ್ಡಾಯ ತಡೆ ಮಾಡಬೇಕು. ಬಂದ್ ಆಗಿರುವ ಖಾಸಗಿ ಆಸ್ಪತ್ರೆಗಳನ್ನು ಕೂಡಲೇ ಕಡ್ಡಾಯವಾಗಿ ತೆರೆಯಬೇಕು ಇಲ್ಲದಿದ್ದಲ್ಲಿ ಪರಿಸ್ಥಿತಿ ನಮ್ಮ ಕೈ ಮೀರಿ ಹೋದರೆ ನಿಯಂತ್ರಣಕ್ಕೆ ತರಲು ಕಷ್ಟವಾಗುತ್ತದೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಬಳಿ ಪರಿಹರಿಸಿಕೊಳ್ಳಬೇಕು ಹಾಗೂ ತಮ್ಮ ಪಿಡಿ ಖಾತೆಯಲ್ಲಿ ಇರುವ ಹಣವನ್ನು ಖರ್ಚು ಮಾಡಲು ಯಾವುದೇ ಹಿಂದೇಟು ಬೇಡವೆಂದರು.ರಾಜ್ಯಾದ್ಯಂತ ರೈತರ ಹಿತದೃಷ್ಟಿಯಿಂದ ಫರ್ಟಿಲೈಸರ್ಗಳು ಮತ್ತು ಮೇವು ಒದಗಿಸುವ ಅಂಗಡಿಗಳನ್ನು ಮುಚ್ಚಬಾರದು. ಅಗತ್ಯ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಕೇಳುವ ಬಗ್ಗೆ ಕಡಿವಾಣ ಹಾಕಬೇಕು ಎಂದರು.
ಪ್ಯಾರಾಮೆಡಿಕಲ್, ಆಸ್ಪತ್ರೆ ಸಿಬ್ಬಂದಿ ಮತ್ತು ಸ್ಟಾಫ್ನರ್ಸ್ಗಳಿಗೆ ಬಾಡಿಗೆ ಮನೆ, ಅಪಾರ್ಟ್ಮೆಂಟ್ಗಳಲ್ಲಿ ಮಾಲೀಕರು ಮನೆ ಖಾಲಿ ಮಾಡಿ ಎಂದು ತೊಂದರೆ ಮಾಡಿದಲ್ಲಿ, ಅಂತಹ ಮಾಲೀಕರನ್ನೇ ಮನೆ ಖಾಲಿ ಮಾಡಿಸಬೇಕು. ಅತ್ಯಾವಶ್ಯಕ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಯಾರೂ ತೊಂದರೆ ಕೊಡುವಂತಿಲ್ಲ ಎಂದು ಸಿಎಂ ಸೂಚಿಸಿದ್ದಾರೆ.
ಮುಖ್ಯಮಂತ್ರಿಗಳ ಸೂಚನೆಗಳು
• ಕೊರೊನಾ ಪಾಸಿಟಿವ್ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು.
• ಪ್ರಾಥಮಿಕ, ದ್ವಿತೀಯ ಸಂಪರ್ಕ ಮತ್ತು ಮನೆಗಳಲ್ಲಿ ಅವಲೋಕನ ಅವಧಿಯಲ್ಲಿರುವವರನ್ನು ಕಟ್ಟುನಿಟ್ಟಾಗಿ ನಿಗಾವಣೆ ಮಾಡಬೇಕು
• ವಿದೇಶ ಪ್ರವಾಸ ಮುಗಿಸಿ ಅವಲೋಕನ ಅವಧಿಯಲ್ಲಿರುವವರ ಕೈಗೆ ಸೀಲ್ ಮತ್ತು ಅವರ ಮನೆ ಮುಂದೆ ಭಿತ್ತಿ ಪತ್ರವನ್ನು ಕಡ್ಡಾಯವಾಗಿ ಅಂಟಿಸಬೇಕು
• ಹೊರ ರಾಜ್ಯದಿಂದ ಬಂದಂತಹ ಪ್ರಯಾಣಿಕರನ್ನು ಪರೀಕ್ಷಿಸಿ, ಅವರನ್ನು 14 ದಿನಗಳ ಮನೆಯಲ್ಲೇ ಅವಲೋಕನ ಅವಧಿಯಲ್ಲಿ ಇರಿಸಬೇಕು.
• ವಿದೇಶ ಪ್ರವಾಸಿ ಮುಗಿಸಿಬಂದವರನ್ನು ಪ್ರತಿದಿನ ಆರೋಗ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡುವ ಹಾಗೂ ಫೋನ್ ಮೂಲಕ ಆರೋಗ್ಯ ವಿಚಾರಿಸಬೇಕು. ಹಾಗೂ ಅಗತ್ಯ ವಸ್ತುಗಳನ್ನು ಅವರಿಗೆ ಪೂರೈಸುವ ಕೆಲಸ ಆಗಬೇಕು.
• ರೇಷ್ಮೆ ಗೂಡು ಮಾರುಕಟ್ಟೆ, ಆಹಾರ ಸಗಟು ವ್ಯಾಪಾರಕ್ಕೆ ಎಪಿಎಂಸಿಯಲ್ಲಿ ವ್ಯವಸ್ಥೆ ಮಾಡಬೇಕು.
• ಲಾರಿಗಳಲ್ಲಿ ಸರಕು ಸಾಗಾಣೆ ಮಾಡುವ ಡ್ರೈವರ್ ಮತ್ತು ಕ್ಲೀನರ್ಗಳಿಗೆ ಎಲ್ಲಿಯೂ ಊಟ-ತಿಂಡಿ ಸಿಗುತ್ತಿಲ್ಲ. ಆದ್ದರಿಂದ ಪ್ರತಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಒಂದು ಅಥವಾ ಎರಡು ಡಾಬಾ ತೆಗೆದು ಅಲ್ಲಿ ಆಹಾರ ಪಾರ್ಸೆಲ್ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು.
• ರಜೆಯಲ್ಲಿರುವ ಹಲವು ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳನ್ನು ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಚಿಸಲಾಗುವುವ ವಿವಿಧ ತಂಡಗಳಿಗೆ ಬಳಕೆ ಮಾಡಿಕೊಳ್ಳಬೆಕು.
• ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಜೊತೆಗೆ ಜನರಿಗೆ ಅಗತ್ಯ ವಸ್ತುಗಳನ್ನು ಅಂತರ ಕಾಯ್ದುಕೊಂಡು ಖರೀದಿಸಲು ಅನುಕೂಲ ಮಾಡಬೇಕು
• ಕಸಾಯಿಖಾನೆಗಳು ಮತ್ತು ಮಾಂಸದಂಗಡಿಗಳನ್ನು ಮುಚ್ಚಬಾರದು
• ಬಡವರು, ನಿರ್ಗತಿಕರು ಮತ್ತು ವಸತಿರಹಿತರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಬೇಕು
• ರಕ್ತನಿಧಿಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೆಕು. ಹಾಗೂ ರಕ್ತದಾನಿಗಳಿಗೆ ಅವಕಾಶ ನೀಡಬೇಕು.
• ಸಾರ್ವಜನಿಕರು ತಮ್ಮ ಅಗತ್ಯ ವಸ್ತುಗಳನ್ನು ಹತ್ತಿರದ ಅಂಗಡಿಗಳಲ್ಲಿ ಕೊಂಡುಕೊಳ್ಳಬೇಕು.
• ಎಲ್ಲ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳು ತೆರೆದು ಜನಸಂದಣಿಯಾಗದಂತೆ ಕ್ರಮ ವಹಿಸಿ ಸೇವೆ ಒದಗಿಸಬೇಕು.
• ಕೋವಿಡ್ ಆಸ್ಪತ್ರೆಗಳು, ಫಿವರ್ಕ್ಲಿನಿಕ್ಗಳನ್ನು ಎಲ್ಲ ಜಿಲ್ಲೆಗಳಲ್ಲಿ ಸೂಕ್ತ ಸಲಕರಣಗಳೊಂದಿಗೆ ಸಿದ್ದವಿರಿಸಿಕೊಳ್ಳಬೇಕು.
ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಿದರೆ ಬಂಧನ
ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ರಾಜ್ಯದಲ್ಲಿ ಲಾಕ್ಡೌನ್ ಮಾಡಿ ಎಷ್ಟೇ ಬಿಗಿ ನಿಲುವು ತೆಗೆದುಕೊಂಡರೂ ಹಲವಾರು ಜಿಲ್ಲೆಗಳಲ್ಲಿ ಸಾರ್ವಜನಿಕರು ಗುಂಪು ಸೇರುತ್ತಿರುವುದು, ಹೊರಗಡೆ ಅನಗತ್ಯವಾಗಿ
ನಮ್ಮ ಗಮನಕ್ಕೆ ಬಂದಿದೆ. ಇತ್ತೀಚೆಗೆ ಕೆಲ ಯುವಕರು ಅನಗತ್ಯವಾಗಿ ಬೈಕ್ನಲ್ಲಿ ರಸ್ತೆಯಲ್ಲಿ ಓಡಾಡುತ್ತಿರುವುದನ್ನು ತಡೆದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಇನ್ನು ಮುಂದೆ ಹೀಗೆ ಮಾತು ಕೇಳದೆ ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡುವವರಿಗೆ ಪೊಲೀಸರು ಬಂಧನದಲ್ಲಿರಸುವಂತೆ ಸೂಚಿಸಿದರು.
ಸಭೆಯಲ್ಲಿ ಎಸ್ಪಿ ಹನುಮಂತರಾಯ, ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ ಎಸಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಹೆಚ್ಓ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.



