ಡಿವಿಜಿಸುದ್ದಿ.ಕಾಂ, ದಾವಣಗೆರೆ: ಮಹರ್ಷಿ ಶ್ರೀವಾಲ್ಮೀಕಿ ಜಯಂತಿಯ ಅಂಗವಾಗಿ ಜಿಲ್ಲಾ ವಾಲ್ಮೀಕಿ ನಾಯಕ ಯುವಘಟಕದಿಂದ ಅ.12 ರಂದು ಬೆಳಗ್ಗೆ 10 ಕ್ಕೆ 5ನೇ ವರ್ಷದ ಬೃಹತ್ ಬೈಕ್ ಜಾಥಾ ಹಮ್ಮಿಕೊಂಡಿದೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಯುವ ಘಟಕ ಜಿಲ್ಲಾ ಸಂಚಾಲಕ ಡಿ.ಜಿ.ಮಂಜುನಾಥ್ , ಹೊಂಡದ ವೃತ್ತದಿಂದ ಪ್ರಾರಂಭವಾಗುವ ಬೈಕ್ ಜಾಥಾಕ್ಕೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ನಂತರ ಜಾಥಾ ದುರ್ಗಾಂಬಿಕ ದೇವಸ್ಥಾನದ ಮೂಲಕ ಹಗೇದಿಬ್ಬ ವೃತ್ತ, ಕೆ.ಆರ್.ರಸ್ತೆ, ಗಾಂಧಿವೃತ್ತ, ಮಹಾನಗರ ಪಾಲಿಕೆ, ಪಿಬಿ ರಸ್ತೆ, ನಿಜಲಿಂಗಪ್ಪ ಬಡಾವಣೆಯ ಮುಖ್ಯರಸ್ತೆ ಮಾರ್ಗವಾಗಿ ರಾಮ್ ಅಂಡ್ ಕೋ ವೃತ್ತ, ಎವಿಕೆ ರಸ್ತೆ, ನಾಯಕವಿದ್ಯಾರ್ಥಿನಿಲಯ, ಕೆಬಿ ವೃತ್ತ, ಜಯದೇವವೃತ್ತ, ಹದಡಿ ಮುಖ್ಯರಸ್ತೆಯಲ್ಲಿ ಸಂಚರಿಸಿ ಹೆಚ್ ಕೆ ಆರ್ ವೃತ್ತದಲ್ಲಿ ಕೊನೆಗೊಳ್ಳಲಿದೆ.
ನಂತರ ವಿವಿಧ ಕಲಾ ತಂಡಗಳಿಂದ ಹಾಗೂ ಡಿಜೆಯೊಂದಿಗೆ ಶ್ರೀದುರ್ಗಾಂಬಿಕ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಗುವುದು. ಈಬಾರಿಯ ಱ್ಯಾಲಿಯಲ್ಲಿ ಸುಮಾರು 1500 ಬೈಕ್ ಗಳಲ್ಲಿ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ವಿನಾಯಕ ಪೈಲ್ವಾನ್, ಶಾಮನೂರು ಪ್ರವೀಣ್, ಐಗೂರು ಹನುಮಂತಪ್ಪ, ಅಳಗೋಡಿರಾಜು, ಸುರೇಶ್, ಸತೀಶ್, ಕುಮಾರ್, ಷಣ್ಮುಖ ಆರ್ ಲಕ್ಷ್ಮಣ್ ಉಪಸ್ಥಿತರಿದ್ದರು.



