ಡಿವಿಜಿ ಸುದ್ದಿ, ದಾವಣಗೆರೆ: ವಿದ್ಯಾರ್ಥಿಗಳು ಆಲೋಚನೆ ಮಾಡುವುದನ್ನೇ ಮರೆತ್ತಿದ್ದಾರೆ. ಯಾವುದು ಸರಿ, ಯಾವುದು ಸರಿಯಲ್ಲ ಎಂಬದನ್ನು ಯೋಚಿಸುತ್ತಿಲ್ಲ ಎಂದು ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ ಆತಂಕ ವ್ಯಕ್ತಪಡಿಸಿದರು.
ಭದ್ರ ಕಾಲೇಜಿನ `ದಶಮಾನೋತ್ಸವ’ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ವಿವೇಕ ಕಲಿತುಕೊಳ್ಳುತ್ತೇವೆ. ಇಡೀ ಜಗತ್ತಿನ ಭವಿಷ್ಯ ನಿರ್ಧಾರವಾಗುವುದೇ ವಿದ್ಯಾರ್ಥಿಗಳಿಂದ. ಆದರೆ, ವಿದ್ಯಾರ್ಥಿಗಳಲ್ಲಿ ಆಲೋಚನ ಶಕ್ತಿ ಕಡಿಮೆ ಆಗುತ್ತಿರುವುದು ಆತಂಕ ಮೂಡಿಸಿದೆ. ಇಂದಿನ ವಿದ್ಯಾರ್ಥಿಗಳಿಗೆ ಯಾವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇವೆ ಎಂಬುದೇ ಗೊತ್ತಿಲ್ಲದಂತಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭಾನ್ವಿತ ರಿಗೆ ಎಲ್ಲಾ ಕಾಲದಲ್ಲಿ ಅವಕಾಶವಿದೆ. ನಗರದಲ್ಲಿ ಸಾಕಷ್ಟು ಪ್ರತಿಷ್ಠಿತ ಶಾಲಾ, ಕಾಲೇಜುಗಳಿವೆ. ಆದರೆ, ಕಾಲೇಜು ಎಷ್ಟೇ ಚನ್ನಾಗಿದ್ದರೂ, ಸ್ವಯಂ ಪ್ರತಿಭೆ ಅವಶ್ಯ. ಇನ್ನು ವಿದ್ಯಾರ್ಥಿಗಳು ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳಿಂದ ದೂರು ಉಳಿಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಪ್ರೊ. ಬಿ.ಎಸ್. ಶೇರಿಗಾರ್, ಭದ್ರಾ ಕಾಲೇಜ್ ಅಧ್ಯಕ್ಷ ಕೆ.ಜಿ ಉಮೇಶ್, ಪ್ರಾಂಶುಪಾಲ ಪ್ರೊ. ಯು. ಗುರುಸ್ವಾಮಿ ಪ್ರೊ.ಮುರುಗೇಶ್ ಉಪಸ್ಥಿತರಿದ್ದರು.



