ಡಿವಿಜಿ ಸುದ್ದಿ, ದಾವಣಗೆರೆ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅತ್ಯಂತ ಕಠಿಣವಾದ ಸೈನಿಕ ವೃತ್ತಿಯಲ್ಲೂ ಮಹಿಳೆಯರು ತನ್ನ ಛಾಪನ್ನು ಮೂಡಿಸಿದ್ದು, ಪುರುಷರಿಗೆ ಸರಿಸಮಾನಾಗಿ ಜೋಡೆತ್ತಿನಂತೆ ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಎ.ವಿ.ಕಮಲಮ್ಮ ಮಹಿಳಾ ಕಾಲೇಜು ಆವರಣದಲ್ಲಿ ಮಾ.13 ರಂದು ಆಯೋಜಿಸಲಾಗಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಟುಂಬದಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ನೀಡಿದಲ್ಲಿ, ಅನಕ್ಷರಸ್ಥ ಮಹಿಳೆಯೂ ಉತ್ತಮ ಸಾಧನೆ ಮಾಡುತ್ತಾರೆ. ಇದಕ್ಕೆ ನಾನೇ ಉದಾಹರಣೆ. ಕುಟುಂಬದವರ ಮತ್ತು ಪತಿಯ ಸಹಕಾರ ಮತ್ತು ಪ್ರೋತ್ಸಾಹದಿಂದ ಇಂದು ನಾನು ಜಿ.ಪಂ.ಅಧ್ಯಕ್ಷೆಯಾಗಿದ್ದೇನೆ. ಪತಿ ಮತ್ತು ಪತ್ನಿ ಇಬ್ಬರು ಸಂಸಾರವೆಂಬ ಬಂಡಿಯ ಎರಡು ಚಕ್ರಗಳಿದ್ದಂತೆ. ಹೆಣ್ಣು, ಮಗಳಾಗಿ ಸಹೋದರಿಯಾಗಿ, ಪತ್ನಿಯಾಗಿ ಹಾಗೂ ಮಕ್ಕಳಿಗೆ ತಾಯಿಯಾಗಿ, ಕುಟುಂಬದ ನಿರ್ವಹಣೆ ಮಾಡುತ್ತಾಳೆ. ಆದ್ದರಿಂದ ಕುಟುಂಬದಲ್ಲಿ ಮಹಿಳೆಯರಿಗೆ ಗೌರವ ನೀಡುವುದರ ಜೊತೆಗೆ ಅವಳಲ್ಲಿರುವ ಪ್ರತಿಭೆಯನ್ನು ಹೊರಹಾಕಿ ಏನಾದರೂ ಸಾಧನೆ ಮಾಡುವಂತೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾತನಾಡಿ, ಎಲ್ಲಿ ನಾರಿಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಆದ್ದರಿಂದ ಹೆಣ್ಣು ಮಕ್ಕಳು ದೇವತಾ ಸ್ವರೂಪಿಗಳು. ಪ್ರತಿಯೊಬ್ಬರು ಹೆಣ್ಣನ್ನು ಗೌರವಿಸಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಮಹಿಳೆಯು ಪ್ರಾಮಾಣಿಕತೆ, ಶಿಸ್ತು ಮತ್ತು ನಿಷ್ಠೆಯ ಸಂಕೇತ. ಭೂಮಿಯಷ್ಟೇ ಸಹನೆಯನ್ನು ಮಹಿಳೆ ಹೊಂದಿದ್ದಾಳೆ ಎಂದರು.
ಹೆಣ್ಣು ಭ್ರೂಣಹತ್ಯೆಯನ್ನು ತಡೆಯುವುದರ ಜೊತೆಗೆ ಮಹಿಳೆಯರ ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ಅನೇಕ ಕಾನೂನಗಳನ್ನು ಸರ್ಕಾರ ಜಾರಿಗೆ ತಂದಿದೆ. ಹಲವು ಕ್ಷೇತ್ರಗಳಲ್ಲಿ ಮಹಿಳೆಯರಿಗಾಗಿ ಮೀಸಲಾತಿಯನ್ನು ಸರ್ಕಾರ ಕಲ್ಪಿಸಿದೆ. ರಾಜಕಿಯದಲ್ಲಿ ಶೇ.33, ಶಿಕ್ಷಣದಲ್ಲಿ ಶೇ. 50, ಕಾರ್ಪೋರೆಟ್ ಕ್ಷೇತ್ರಗಳಲ್ಲಿ ಶೇ. 50 ಮೀಸಲಾತಿ ನೀಡಲಾಗಿದೆ. ಮಹಿಳೆಯರ ಅಭಿವೃದ್ದಿಯ ಪ್ರಮಾಣದ ಆಧಾರದ ಒಂದು ಸಮಾಜ ಎಷ್ಟು ಪ್ರಗತಿಯಾಗಿದೆ ಎಂದು ನಿರ್ಧರಿಸಬಹುದು ಎಂದು ಹೇಳಿದರು.
ಜಾನಪದ ತಜ್ಞ ಎಂ.ಜೆ. ಈಶ್ವರಪ್ಪ ಮಾತನಾಡಿ, ಮಹಿಳೆ ಎಂದರೆ ಸಂಸ್ಕೃತಿ. ಸಂಸ್ಕೃತಿ ಎಂದರೆ ಮಹಿಳೆ. ಮಹಿಳೆ ಕುರಿತಾದ ಆರೋಗ್ಯಕರ ಚರ್ಚೆಗಳಿಂದ ಸ್ವಸ್ಥ ಸಮಾಜವನ್ನು ನಾವು ನಿರ್ಮಾಣ ಮಾಡಬೇಕಾಗಿದೆ. ಗಾದೆ ಮಾತುಗಳು , ಜಾನಪದ ಕಲೆಗಳು, ನೃತ್ಯ, ಸಾಹಿತ್ಯ ಮತ್ತು ಸಂಗೀತ ಸೇರಿದಂತೆ ಎಲ್ಲಾ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಅಪಾರವಿದೆ.
ಸಾಂಸ್ಕೃತಿಕ ಲೋಕ : ಜಾನಪದ ಲೋಕವೇ ಕಾಲೇಜಿನಲ್ಲಿ ನೆಲೆಯೂರಿತ್ತು. ಎತ್ತ ನೋಡಿದರೂ ಜಾನಪದ ಕಲಾತಂಡಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು. ಮಳವಳ್ಳಿಯ ಸವಿತಾ ಚಿರಕುನ್ನಯ್ಯರವರ ಪೂಜಾ ಕುಣಿತ, ತುಮಕೂರಿನ ಹರ್ಷಿತಾ ತಂಡದ ಡೊಳ್ಳು ಕುಣಿತದ ಮೆರವಣಿಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ಮಹಿಳಾ ಸಾಂಸ್ಕೃತಿಕ ಉತ್ಸವದ ಪ್ರಯುಕ್ತ ಪೌರಕಾರ್ಮಿಕ ಮಹಿಳೆಯರಿಗೆ ರಂಗೋಲಿ ಬಿಡಿಸುವ ಸ್ಪರ್ಧೆ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮಹಿಳೆಯರ ಮೇಲಿನ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ ಮತ್ತು ಬಾಲ್ಯ ವಿವಾಹ ನಿಷೇಧ ಕುರಿತು ವಿದ್ಯಾರ್ಥಿನಿಯರು ಬಿಡಿಸಿದ ಚಿತ್ರಕಲೆಗಳು ಎಲ್ಲರ ಗಮನಸೆಳೆದವು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಎವಿಕೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಶಿವಪ್ರಕಾಶ್.ಪಿ.ಎಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್ ಕುರ್ಕಿ, ಎಸ್.ಜೆ.ಜೆ.ಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ರಾಜೇಶ್ವರಿ ಅಣ್ಣಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.