ಡಿವಿಜಿ ಸುದ್ದಿ, ದಾವಣಗೆರೆ: ಅಡಿಕೆ ಬೆಳೆ ಬಿಸಿಲಿನ ತಾಪಕ್ಕೆ ಕಾಂಡ ಸೀಳುವ ಸಂಭವವಿ ಹೆಚ್ಚಾಗಿ ಕಂಡು ಬರುತ್ತಿದೆ. ಈ ಬಗ್ಗೆ ರೈತರು ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ತೋಟಗಾರಿಕೆ ಇಲಾಖೆ ಕೆಲವೊಂದು ಸಲಹೆ-ಸೂಚನೆ ನೀಡಿದೆ.
ಸೂರ್ಯನ ಕಿರಣಗಳು ನೈರುತ್ಯ ದಿಕ್ಕಿನಿಂದ ನೇರವಾಗಿ ಅಡಿಕೆ ಮರಗಳ ಮೇಲೆ ಬೀಳುವುದರಿಂದ ಕಾಂಡಗಳು ಸುಟ್ಟಂತಾಗಿ ಸೀಳುತ್ತವೆ. ಕಾಂಡದ ಎಳೆಯ ಭಾಗ ಬಂಗಾರದ ಹಳದಿ ಬಣ್ಣಕ್ಕೆ ಮಾರ್ಪಟ್ಟು ನಂತರದಲ್ಲಿ ಬಿರುಕುಗಳು ಕಾಣಿಸಿಕೊಂಡು ಕಾಂಡಗಳು ಬಲಹೀನವಾಗುತ್ತದೆ. ಇಂತಹ ಬಿರುಕುಗಳ ಮೂಲಕ ರೋಗಾಣುಗಳು ಒಳಗೆ ಸೇರಿಕೊಂಡು ರೋಗ ತಗಲುವ ಸಾಧ್ಯತೆ ಹೆಚ್ಚಾಗಿದ್ದು, ಬಲವಾದ ಗಾಳಿ ಬೀಸಿದಾಗ ಮರಗಳು ಮುರಿದು ಬೀಳಿತ್ತವೆ.
ಮಂಜಾಗ್ರತಾ ಕ್ರಮಗಳು
- ಸೂರ್ಯನ ಬೇಗೆಯಿಂದ ಮರದ ಕಾಂಡಗಳು ಸೀಳುವುದನ್ನು ತಪ್ಪಿಸಲು ತೋಟದ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಎತ್ತರಕ್ಕೆ ಬೆಳೆಯುವ ನೆರಳು ಸಸ್ಯಗಳು ಬೆಳಸಬೇಕು.
- ಸಸಿಗಳನ್ನು ನೆಡುವಾಗ ಸರಿಯಾದ ದಿಕ್ಕಿನಲ್ಲಿ ನಾಟಿ ಮಾಡಿ ನೆರಳನ್ನು ಒದಗಿಸಬೇಕು.
- 10 ಕೆ.ಜಿ ಸುಣ್ಣ, 2ಕೆ.ಜಿ ಬೆಲ್ಲ ಮತ್ತು ಅರ್ಧ ಕೆ.ಜಿ.ಮೈದಾ ಹಿಟ್ಟನ್ನು ನೀರಿನಲ್ಲಿ ಬೆರೆಸಿ ಮಿಶ್ರಣವನ್ನು ಕಾಂಡಗಳಿಗೆ ಬಳಿಯುವುದರಿಂದ ಮರಗಳನ್ನು ರಕ್ಷಿಸಬಹುದು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಸಲಹಾ ಮತ್ತು ಮಾಹಿತಿ ಕೇಂದ್ರ, ದಾವಣಗೆರೆ ಸಂಪರ್ಕಿಸಬಹುದೆಂದು ಜಿ.ಪಂ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.



