Connect with us

Dvgsuddi Kannada | online news portal | Kannada news online

ದಾವಣಗೆರೆ ಜಿಲ್ಲೆಗೆ ಶೀಘ್ರವೇ ಕೊರೊನಾ ವೈರಸ್ ತಪಾಸಣಾ ಲ್ಯಾಬ್ ಮಂಜೂರು: ಆರೋಗ್ಯ ಸಚಿವ ಬಿ.ಶ್ರೀರಾಮುಲು

ಪ್ರಮುಖ ಸುದ್ದಿ

ದಾವಣಗೆರೆ ಜಿಲ್ಲೆಗೆ ಶೀಘ್ರವೇ ಕೊರೊನಾ ವೈರಸ್ ತಪಾಸಣಾ ಲ್ಯಾಬ್ ಮಂಜೂರು: ಆರೋಗ್ಯ ಸಚಿವ ಬಿ.ಶ್ರೀರಾಮುಲು

ಡಿವಿಜಿ ಸುದ್ದಿ, ದಾವಣಗೆರೆ : ದಾವಣಗೆರೆ ಜಿಲ್ಲೆಗೆ ಶೀಘ್ರವೇ ಕೊರೊನಾ ವೈರಸ್ ತಪಾಸಣಾ ಲ್ಯಾಬ್ ಮಂಜೂರು ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೊರೊನಾ ರೋಗ ನಿಯಂತ್ರಣ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಕೊರೊನಾ ತಪಾಸಣೆಗಾಗಿ 16 ಲ್ಯಾಬ್‍ಗಳಿವೆ. 10 ಹೊಸದಾಗಿ ಮಂಜೂರು ಮಾಡಲಾಗುವುದು. ಅದರಲ್ಲಿ ಒಂದನ್ನು ಜಿಲ್ಲೆಗೆ ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿ ಒಟ್ಟು 258 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 65 ಜನರು ಗುಣಮುಖರಾಗಿದ್ದಾರೆ. ಈ ಮೊದಲು ಕೊರೊನಾ ಸೋಂಕಿತರಲ್ಲಿ ರಾಜ್ಯ 3ನೇ ಸ್ಥಾನದಲ್ಲಿತ್ತು. ನಂತರ ನಿಯಂತ್ರಣ ಕ್ರಮ ಕೈಗೊಂಡ ಮೇಲೆ 12ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 10 ಸಾವಿರ ಐಸಿಯು ಬೆಡ್ ಸೌಲಭ್ಯ ಹೊಂದಿದ್ದೇವೆ. ಸರ್ಕಾರಿ ಹಾಗೂ ಖಾಸಗಿ ಸೇರಿ 700 ವೆಂಟಿಲೇಟರ್ ಸೌಲಭ್ಯವಿದೆ. ರಾಜ್ಯದ ಯಾವೊಬ್ಬ ರೋಗಿಯು ಸಹ ವೆಂಟಿಲೇಟರ್‍ಗೆ ಹೋಗದಂತೆ ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ನೀಡಬೇಕು. ವೆಂಟಿಲೇಟರ್ ಆಪರೇಟರ್‍ಗಳಿಗೆ ತರಬೇತಿ ನೀಡಲು ಕ್ರಮವಹಿಸಲಾಗುವುದು.

ದಾವಣಗೆರೆ ಜಿಲ್ಲೆಯಲ್ಲಿಯೂ ಸಹ ವೈದ್ಯರು, ನರ್ಸ್, ಸಿಬ್ಬಂದಿ ಹಾಗೂ ಮೆಡಿಕಲ್‍ಗೆ ಸಂಬಂಧಿಸಿದಂತೆ ಉತ್ತಮ ಸೌಲಭ್ಯವಿದೆ. ಬೇರೆ ರಾಷ್ಟ್ರಗಳ ಜನರಿಗೆ ಹೋಲಿಸಿದಲ್ಲಿ ನಮ್ಮ ದೇಶದ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು, ಇದು ಕೊರೊನಾ ವೈರಾಣು ನಿಯಂತ್ರಿಸಲು ಸಹಕಾರಿಯಾಗಿದೆ. ಈವರೆಗೂ ಸಹ ಕೋವಿಡ್ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಆದರೆ ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ವೈರಾಣುವಿನಿಂದ ಅಂತರ ಕಾಯ್ದುಕೊಳ್ಳಬೇಕು ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 7 ಸೂತ್ರ ಸೂಚನೆ ನೀಡಿದ್ದಾರೆ. ಅವುಗಳನ್ನು ಎಲ್ಲರೂ ಪಾಲಿಸೋಣ. ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಜಿಲ್ಲಾವಾರು ಮಾಹಿತಿ ಪಡೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರೆಲ್ಲರೂ ಮನೆಯಲ್ಲಿಯೇ ಇದ್ದು, ಕೊರೊನಾ ವೈರಸ್ ನಿಯಂತ್ರಣಕ್ಕೆ ಸಹಕರಿಸೋಣ ಎಂದರು.

ರಾಜ್ಯದ ಕಲಬುರುಗಿ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಒಟ್ಟು 20 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಲಾಗಿದೆ. ಒಂದೊಂದು ಜಿಲ್ಲೆಯಲ್ಲಿ ಸಹ ಒಂದೊಂದು ದಂಥ ಕತೆ ಇದೆ. ಎಲ್ಲ ರಾಜಕೀಯ ಪಕ್ಷದವರು ಸಹ ಪಕ್ಷಾತೀತಾವಾಗಿ ಕೋವಿಡ್ ನಿಯಂತ್ರಣಕ್ಕೆ ಬೆಂಬಲ ನೀಡುತ್ತಿದ್ದಾರೆ. ಇಂದು ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಮೊದಲು ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ಆತಂಕ ವಾತಾವರಣ ನಿರ್ಮಾಣವಾಗಿತ್ತು. ನಂತರದಲ್ಲಿ ಜಿಲ್ಲಾಡಳಿತ ಹಾಗೂ ವೈದ್ಯಕೀಯ ಇಲಾಖೆಗಳ ನಿರಂತರ ಶ್ರಮದಿಂದ ಕೊರೊನಾ ಪಾಸಿಟಿವ್ ಸೋಂಕಿತರು ಗುಣಮುಖರಾಗಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆಂದು ತಿಳಿಸಿದರು.

ಕೋವಿಡ್ ತಪಾಸಣೆಗಾಗಿ 2 ಲಕ್ಷ ಕಿಟ್‍ಗಳನ್ನು ಖರೀದಿಸಲಾಗಿದ್ದು, ಎಲ್ಲಾ ಜಿಲ್ಲೆಗಳಿಗೂ ಸರಬರಾಜು ಮಾಡಲಾಗುವುದು. ಇದರಿಂದ ಪ್ರೈಮರಿ ಕಾಂಟ್ಯಾಕ್ಟ್ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್‍ನಲ್ಲಿರುವವರನ್ನು ತಪಾಸಣೆಗೆ ಒಳಪಡಿಸಲು ಕ್ರಮವಹಿಸುವಂತೆ ತಿಳಿಸಿದರು.
ಮೈಸೂರಿನ ನಂಜನಗೂಡಿನ ಜುಬಿಲಿಯೆಂಟ್ 58 ಜನರಿಗೆ ಕೋವಿಡ್ ಪಾಸಿಟಿವ್ ಪ್ರಕರಣ ಬಂದಿದೆ. ಇಲ್ಲಿಗೆ ಚೀನಾ, ಜಪಾನ್ ಹಾಗೂ ದೆಹಲಿಯಿಂದ ಅನೇಕರು ಭೇಟಿ ನೀಡಿ ಹೋಗಿದ್ದಾರೆ. ಇದುವರೆಗೂ ಪ್ರಕರಣದ ಮೂಲವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಜಿಲ್ಲೆಯ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಒಗ್ಗಟ್ಟಾಗಿ ರೋಗ ನಿಯಂತ್ರಣಕ್ಕೆ ಕ್ರಮ ವಹಿಸಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಅನೇಕ ದಾನಿಗಳು ಸಹ ಮುಂದೆ ಬಂದು ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಇನ್ನೂ ಹೆಚ್ಚಿನ ದಾನಿಗಳು ಬಂದು ಬಡವರಿಗೆ ನೆರವಾಗುವಂತೆ ಕೋರಿದರು.
ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಇದರಿಂದ ಕೊರೊನಾ ವೈರಸ್ ಕುರಿತಾದ ಮಾಹಿತಿ ದೊರೆಯಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಪ್ರಧಾನಮಂತ್ರಿಯವರು ಲಾಕ್‍ಡೌನ್ ಅವಧಿಯನ್ನ ಮೇ 3 ರವರೆಗೆ ವಿಸ್ತರಿಸಿದ್ದಾರೆ. ಇನ್ನೂ 20 ರಿಂದ 25 ದಿನಗಳವರೆಗೆ ಎಚ್ಚರಿಕೆಯಿಂದ ಶ್ರಮವಹಿಸಿ ರೋಗ ನಿಯಂತ್ರಣ ಮಾಡೋಣ ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಬಡವರು ಹಸಿವಿನಿಂದ ಬಳಲದಂತೆ ಸಕಾಲಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ನಮ್ಮಲ್ಲಿ ಬೇಕಾದಷ್ಟು ವೈದ್ಯರು ನೀವು ಜಿಲ್ಲಾಡಳಿತದಿಂದ ಕೋವಿಡ್ ಪರೀಕ್ಷೆಗೆ ಕಿಟ್ ಒದಗಿಸಿದಲ್ಲಿ ತಪಾಸಣೆಗಾಗಿ ಇವರನ್ನು ಬಳಸಿಕೊಳ್ಳಬಹುದು. ಜಿಲ್ಲಾಡಳಿತಕ್ಕೆ ದೇಣಿಗೆ ರೂಪದಲ್ಲಿ ಸಾಕಷ್ಟು ಹಣ ಮತ್ತು ದವಸ ಧಾನ್ಯ ಬಂದಿದೆ. ಅದನ್ನು ಸರಿಯಾಗಿ ಬಳಕೆ ಮಾಡಬೇಕು. ಪಕ್ಷಬೇಧ ಮರೆತು ನಾವೆಲ್ಲರೂ ರೋಗ ನಿಯತ್ರಂಣಕ್ಕಾಗಿ ಶ್ರಮಿಸೋಣ ಎಂದರು.

ಹರಿಹರ ಶಾಸಕ ಎಸ್.ರಾಮಪ್ಪ ಮಾತನಾಡಿ, ಲಾಕ್‍ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರು, ಆಟೋ ಚಾಲಕರು ಹಾಗೂ ಗ್ಯಾರೇಜ್ ಕೆಲಸಗಾರು ಸೇರಿದಂತೆ ಕೂಲಿ ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆ. ಈಗಗಾಲೇ 21 ದಿನ ಕಳೆದಿದೆ. ಇವರಿಗೆ ಜೀವನ ಸಾಗಿಸಲು ಯಾವುದೇ ಕಷ್ಟವಾಗದಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು. ಬಡವರು, ಹಸಿದವರಿಗೆ ಊಟ ಕೊಡುವ ವ್ಯವಸ್ಥೆ ಸುಗುಮವಾಗಿ ನಡೆಯಬೇಕು. ಶಾಸಕರ ಅನುದಾನ ಬಳಸಿಕೊಂಡು ಆಹಾರದ ಕಿಟ್ ತಯಾರಿಯಾಗಬೇಕು. ಜೊತೆಗೆ ರೈತರ ಮೇಲೆ ಅನಾವಶ್ಯಕವಾಗಿ ಪೊಲೀಸರಿಂದ ಹಲ್ಲೆ ಆಗುತ್ತಿದೆ. ದಯಾಮಾಡಿ ಈ ಬಗ್ಗೆ ಗಮನಹರಿಸಬೇಕಿದೆ ಎಂದರು.

ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಜಗಳೂರ ತಾಲ್ಲೂಕಿನಲ್ಲಿ ಇದುವರೆಗೂ ಯಾವುದೇ ಕೊರೊನಾ ಸೋಂಕು ಪ್ರಕರಣ ಕಂಡುಬಂದಿಲ್ಲ. ತಾಲ್ಲೂಕು ಕೇಂದ್ರಸ್ಥಾನವಾಗಿರುವುದರಿಂದ. ಕೂಡ್ಲಿಗಿ, ಕೊಟ್ಟೂರು, ಮೊಳಕಾಲ್ಮುರು ಸೇರಿದಂತೆ ಸುತ್ತಮುತ್ತಲಿನ ಜನರು ತಪಾಸಣೆಗೆ ಬರುತ್ತಾರೆ. ಆದರೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಜೊತೆಗೆ ವೆಂಟಿಲೇಟರ್ ಇದ್ದರೂ ಅದನ್ನು ಆಪರೇಟ್ ಮಾಡುವ ಸಿಬ್ಬಂದಿಗಳಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ಜಿಲ್ಲೆಯ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್‍ಗಳಲ್ಲಿನ ಕೆಲ ಸಿಬ್ಬಂದಿಗಳನ್ನು ನಿಯೋಜಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಕೊರೊನಾ ಪ್ರಕರಣ ನಿಯಂತ್ರಣಕ್ಕೆ ಬಂದಕೂಡಲೇ ಎಲ್ಲಾ ಆಸ್ಪತ್ರೆಗಳಿಗೆ ಬೇಕಾದ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಿಸುವ ಭರವಸೆ ನೀಡಿದರು.
ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಲಾಕ್‍ಡೌನ್ ವಿಸ್ತರಣೆಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮುಂಜಾಗ್ರತಾ ಕ್ರಮವಾಗಿ ಬೇರೆ ದೇಶಕ್ಕೆ ಹೋಲಿಸಿದಲ್ಲಿ ನಮ್ಮ ದೇಶದಲ್ಲಿ ಕೋವಿಡ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಆಶಾ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಇರುವಂತೆ ಜಿಲ್ಲೆಯಲ್ಲಿಯೂ ಸಹ ಗುಣಮಟ್ಟದ ಸೌಲಭ್ಯಗಳನ್ನು ಒಳಗೊಂಡ ವಾರ್ ರೂಂ ಕಾರ್ಯ ನಿರ್ವಹಿಸಬೇಕು ಎಂದರು

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top