ಡಿವಿಜಿ ಸುದ್ದಿ, ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕಣಗಳು ಗಂಗಾವತಿ ನಗರ ಹಾಗೂ ಶ್ರೀರಾಮನಗರದಲ್ಲಿ ಹೆಚ್ಚಾಗಿ ಕಾಣಿಸುತ್ತಿರುವ ಕೊರೊನಾ ಹಾಟ್ ಸ್ಪಾಟ್ಗಳೆಂದು ಗುರುತಿಸಿ, ಜುಲೈ 21ರ ರಾತ್ರಿ 8ರಿಂದ 10 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಕೊಪ್ಪಳ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಾತನಾಡಿದ ಅವರು, ಗಂಗಾವತಿ ಮತ್ತು ಶ್ರೀರಾಮನಗರದಲ್ಲಿ ಅಗತ್ಯ ವಸ್ತುಗಳ ಅಂಗಡಿ ತೆರೆದಿರುತ್ತವೆ. ಬ್ಯಾಂಕ್ ಆರಂಭಗಳ ಕುರಿತು ನಾಳೆ ಜಿಲ್ಲಾಧಿಕಾರಿಗಳು ತಿಳಿಸುತ್ತಾರೆ. ಕೊಪ್ಪಳ ತಾಲೂಕಿನಲ್ಲಿ ಭಾಗ್ಯನಗರ ಹಾಟ್ಸ್ಪಾಟ್ ಎಂದು ಗುರುತಿಸಲಾಗಿದ್ದು, ಲಾಕ್ಡೌನ್ ಮಾಡುವ ಕುರಿತು ಚರ್ಚೆ ನಡೆದಿದೆ ಎಂದರು.
ತಕ್ಷಣದಿಂದ 10 ಸಾವಿರ ಆಂಟಿಜೆನ್ ಕಿಟ್ ಖರೀದಿಗೆ ಸೂಚನೆ ನೀಡಲಾಗಿದೆ. 40 ವೆಂಟಿಲೇಟರ್ಗಳ ಜೊತೆಗೆ 21 ವೆಂಟಿಲೇಟರ್ ಖರೀದಿಗೆ ಸೂಚಿಸಲಾಗಿದೆ. ಅದಕ್ಕೆ ಸುಮಾರು 91 ಲಕ್ಷ ಖರ್ಚಾಗುತ್ತದೆ. 1,343 ಹೆಲ್ತ್ ಕಿಟ್ ಅಂಗನವಾಡಿ ಕಾರ್ಯಕರ್ತರಿಗೆ ವಿತರಿಸಲು ನಿರ್ಧರಿಸಲಾಗಿದ್ದು, 55 ಲಕ್ಷ ಖರ್ಚಾಗುತ್ತದೆ ಎಂದು ತಿಳಿಸಿದರು.



