ಡಿವಿಜಿ ಸುದ್ದಿ, ಬಳ್ಳಾರಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಕೆಲಸ ಸ್ಥಗಿತಗೊಳಿಸಿ 10 ದಿನಗಳಿಂದ ಪ್ರತಿಭಟನೆ ನಡೆಸಿದರೂ, ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಸರ್ಕಾರ ತನ್ನು ಮೊಂಡುತನ ಬಿಟ್ಟು ಕೂಡಲೇ ಚರ್ಚೆಗೆ ಕರೆದು ಬೇಡಿಕೆ ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ 42 ಸಾವಿರ ಆಶಾ ಕಾರ್ಯಕರ್ತೆಯರು ಧರಣಿ ನಡೆಸುತ್ತಿದ್ದು, 12 ಸಾವಿರ ಗೌರವಧನ ಮತ್ತು ಕೋವಿಡ್ ಹೋರಾಟದಲ್ಲಿ ರಕ್ಷಣೆಗೆ ಅಗತ್ಯ ಸುರಕ್ಷಾ ಕಿಟ್ ನೀಡಬೇಕೆಂಬುದು ನಮ್ಮ ಬೇಡಿಕೆ. ಆದರೆ, ಸರ್ಕಾರ ಈವರೆಗೆ ನಮ್ಮನ್ನು ಚರ್ಚೆಗೆ ಕರೆದಿಲ್ಲ ಎಂದು ದೂರಿದರು.
10 ಸಾವಿರಕ್ಕೆ ಗೌರವಧನ ಹೆಚ್ಚಿಸುವುದಾಗಿ ಆರೋಗ್ಯ ಸಚಿವರು ಭರವಸೆ ನೀಡುತ್ತಿದ್ದಾರೆ. ಈ ಬಗ್ಗೆ ಬಜೆಟ್ ನಲ್ಲಿ ಮಂಡಿಸುವುದಾಗಿ ಹೇಳಿದ್ದರೂ, ಈವರೆಗೆ ಬೇಡಿಕೆ ಈಡೇರಿಸಲಿಲ್ಲ. ಆನ್ ಲೈನ್ ಸಮಸ್ಯೆಯಿಂದ 15 ತಿಂಗಳ ಹಣ ಬಂದಿಲ್ಲ. ಕೋವಿಡ್ ನಂತರ ಕೆಲಸ ಹೆಚ್ಚಿಸಿದರೇ ಹೊರತು ಹೆಚ್ಚಿಗೆ ಹಣ ನೀಡಲಿಲ್ಲ ಎಂದು ದೂರಿದರು.
ನೆರೆಯ ತೆಲಂಗಾಣ ಮತ್ತು ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾಸಿಕ 10 ಸಾವಿರ ಗೌರವಧನ ನಿಗದಿಪಡಿಸಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿ ಸಹ ನಿಗದಿಸಬೇಕು ಎಂದು ಆಗ್ರಹಿಸಿದರು.



