-ಬಿ.ವಾಮದೇವಪ್ಪ, ಎಂ.ಎ., ಬಿ.ಇಡಿ ,ಅಧ್ಯಕ್ಷರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ದಾವಣಗೆರೆ. ಮೊ- 9448812704
2021 ನೇ ಸಾಲಿನಿಂದ ಜಾರಿಗೆ ತರಲಿರುವ ಭಾರತ ಸರ್ಕಾರ, ಕರ್ನಾಟಕದವರೇ ಆದ ಡಾ. ಕಸ್ತೂರಿ ರಂಗನ್ರವರ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದ ಸಮಿತಿಯು “ನೂತನ ರಾಷ್ಟ್ರೀಯ ಶಿಕ್ಷಣ ನೀತಿ” ಯನ್ನು ಇತ್ತೀಚೆಗೆ ಭಾರತ ಸರ್ಕಾರಕ್ಕೆ ಸಲ್ಲಿಸಿದೆ. ಈ ಸಮಿತಿಯವರು ದೇಶಾದ್ಯಂತ ಶಿಕ್ಷಣ ತಜ್ಞರನ್ನು, ವಿವಿಧ ಸ್ತರದ ೨ ಲಕ್ಷಕ್ಕೂ ಅಧಿಕ ಜನರ ಅಭಿಪ್ರಾಯಗಳನ್ನು ಜಿಲ್ಲಾವಾರು ಪಡೆದು ಸವಿಸ್ತಾರವಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯನ್ನು ಕೇಂದ್ರ ಸರ್ಕಾರದ ಸಚಿವ ಸಂಪುಟದ ಸಭೆ ಒಪ್ಪಿ ಅನುಮೋದನೆ ನೀಡಿದೆ.

ಇದು ಮುಂದೆ ಸಂಸತ್ತಿನ ಹಾಗೂ ರಾಜ್ಯಗಳ ಒಪ್ಪಿಗೆ ಪಡೆದು ರಾಷ್ಟ್ರಪತಿ ಅಂಕಿತ ಬಿದ್ದ ನಂತರ ಇದಕ್ಕೆ ಸಂವಿಧಾನಾತ್ಮಕ ಅಸ್ತಿತ್ವ ಬರುತ್ತದೆ. ಈ ವರದಿಯಲ್ಲಿ ಯಾವುದಾದರೂ ನ್ಯೂನ್ಯತೆಗಳಿದ್ದಲ್ಲಿ ಸಂಸತ್ತು , ಆಯಾ ರಾಜ್ಯ ಸರ್ಕಾರಗಳು ಚರ್ಚಿಸಿ ಸಲಹೆ-ಸೂಚನೆ ಕೊಟ್ಟು ಸರಿಪಡಿಸಲು ಈಗಲೂ ಅವಕಾಶವಿರುತ್ತದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ದಾವಣಗೆರೆ ಜಿಲ್ಲೆಯಲ್ಲಿ ದಿ. 15-07-2019 ರಂದು ಜಿಲ್ಲಾ ಮತ್ತು ಶಿಕ್ಷಣ ತರಬೇತಿ ಸಂಸ್ಥೆ (ಡಯಟ್)ಯಲ್ಲಿ ಡಾ. ಕಸ್ತೂರಿ ರಂಗನ್ರವರ ಸಮಿತಿಯ ನಿರ್ದೇಶನದಂತೆ ಮಾನ್ಯ ಜಿಲ್ಲಾ ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಡಯಟ್ನ ಪ್ರಾಚಾರ್ಯರೂ ಆಗಿರುವ ಹೆಚ್.ಕೆ. ಲಿಂಗರಾಜ್ರವರು ಈ ಬಗ್ಗೆ ವಿಚಾರ ಸಂಕಿರಣವನ್ನು ಆಯೋಜಿಸಿದ್ದರು.
ಈ ಸಭೆಯಲ್ಲಿ ಅಂದಿನ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷರಾಗಿದ್ದ ಶೈಲಜಾಬಸವರಾಜ್, ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳು, ನಿವೃತ್ತ ಪ್ರಾಂಶುಪಾಲರೂ ಆದ ಪ್ರೊ. ಎಸ್.ಬಿ.ರಂಗನಾಥ್ರವರು, ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರೂ ಆಗಿರುವ ಪ್ರೊ. ವೈ. ವೃಷಭೇಂದ್ರಪ್ಪ, ಶಿಕ್ಷಣ ತಜ್ಞ ಡಾ. ಹೆಚ್.ವಿ. ವಾಮದೇವಪ್ಪ, ಪ್ರೊ. ಸಿ.ಹೆಚ್. ಮುರುಗೇಂದ್ರಪ್ಪ, ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ. ವಾಮದೇವಪ್ಪರವರು ವೇದಿಕೆಯನ್ನು ಹಂಚಿಕೊಡು ಅನೇಕ ಸಲಹೆ-ಸೂಚನೆಗಳನ್ನು ನೀಡಿದ್ದರು.
ನೂತನ ಶಿಕ್ಷಣ ನೀತಿಯಲ್ಲಿ ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತಾಯಿತು ಎಂಬ ಮಾತನ್ನು ಪ್ರಸ್ತಾಪಿಸಿ, ಪ್ರಾಥಮಿಕ ಶಿಕ್ಷಣ ಪ್ರಾದೇಶಿಕ ಭಾಷೆಯಲ್ಲಿ ಹಾಗೂ ಮಾತೃಭಾಷೆಯಲ್ಲಿರಬೇಕೆಂದು ಒತ್ತಾಯಪೂರ್ವಕವಾಗಿ ನಾವು ತಿಳಿಸಿದ್ದೇವು. ಅದು ಇಂದಿನ ನೂತನ ಶಿಕ್ಷಣ ನೀತಿಯಲ್ಲಿ ಅಡಕವಾಗಿರುವುದು ಕನ್ನಡಿಗರಿಗೆ ಹಾಗೂ ಪ್ರಾದೇಶಿಕ ಭಾಷಿಕರಿಗೆ ಮತ್ತು ಮಾತೃಭಾಷಿಕರಿಗೆ ಅತ್ಯಂತ ಹೆಮ್ಮೆ ತರುವಂತಹ ವಿಷಯವಾಗಿದೆ. ನೂತನ ಶಿಕ್ಷಣ ನೀತಿಯಲ್ಲಿ ಸ್ವಾವಲಂಬನೆ ಜೀವನವನ್ನು ರೂಪಿಸುವುದಕ್ಕೆ ಮಹತ್ವ ಕೊಡುವಂತಹ ಜ್ಞಾನ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚು ಮಹತ್ವ ನೀಡಿರುವುದು ಅತ್ಯಂತ ಸ್ವಾಗತಾರ್ಹ .
ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರು ಪ್ರಾದೇಶಿಕ ಭಾಷೆಯಾದ ಕನ್ನಡಿಗರಿಗೆ ಹೆಚ್ಚು ಉದ್ಯೋಗಗಳನ್ನು ಮೀಸಲಾಗಿಟ್ಟಿರುವ ಆದೇಶ ಪ್ರತಿಯೊಬ್ಬ ಕನ್ನಡಿಗರಿಗೂ ಹರ್ಷ ತರುವಂತಾಗಿದೆ. ಇಂತಹ ಅವಕಾಶಗಳನ್ನು ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ಗಳು ಕೂಡಲೇ ಜಾರಿಗೆ ತರಬೇಕು. ಇಂತಹ ಆದೇಶವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ರವರಿಗೂ, ಇದಕ್ಕಾಗಿ ಹೋರಾಟ ನಡೆಸಿದ ಕನ್ನಡಾಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡಪರ ಸಂಘಟನೆಗಳು ಅಭಿನಂದನಾರ್ಹರು.