ಬೆಂಗಳೂರು : ಇಂದಿನ ವಿಧಾನ ಪರಿಷತ್ ನಲ್ಲಿನ ಗಲಾಟೆಯ ಬಗ್ಗೆ ವಿಷಾದಿಸುತ್ತೇನೆ. ಆದರೆ, ಸಭಾಪತಿ ಇರುವಾಗ ಉಪಸಭಾಪತಿ ಕೂತಿದ್ಯಾಕೆ ..? ಈ ಗಲಾಟೆಯಲ್ಲಿ ಬಿಜೆಪಿ ಗುಂಡಾವರ್ತನೆ ತೋರಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದರು.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅವಿಶ್ವಾಸ ನಿರ್ಣದ ನೋಟಿಸ್ ಕ್ರಮಬದ್ಧವಾಗಿರಲಿಲ್ಲ. ನೋಟಿಸ್ ತಿರಸ್ಕರಿಸುವ ಅಧಿಕಾರ ಸ್ಪೀಕರ್ ಗೆ ಇದೆ. ಕ್ರಮಬದ್ಧವಾಗಿರದಂತೆ ನೋಟಿಸ್ ಅನ್ನು ಸ್ಪೀಕರ್ ತಿರಸ್ಕರಿಸಿದ್ದಾರೆ. ನಿಯಮಾವಳಿ ಪ್ರಕಾರ ಕಲಾಪ ನಡೆಯಬೇಕು. ಹೀಗಿದ್ದೂ ಇದ್ಯಾವುದನ್ನು ಇಂದಿನ ಕಲಾಪದಲ್ಲಿ ಪಾಲಿಸಿಲ್ಲ ಎಂದರು.
ಮೋಷನ್ ರಿಜೆಕ್ಟ್ ಆದ ಮೇಲೆ ಸಭಾಪತಿ ಕೂರುವ ಬದಲಾಗಿ, ಉಪ ಸಭಾಪತಿಯನ್ನು ಕೂರಿಸಿದ್ದು ಬಿಜೆಪಿ. ಇದು ಕಾನೂನು ಬಾಹಿರ ಅಪರಾಧವಾಗಿದೆ. ಸಭಾಪತಿ ಬರಬಾರದು ಎಂದು ಬಾಗಿಲು ಕೂಡ ಹಾಕಿದ್ದು ಬಿಜೆಪಿ. ಇದು ಗುಂಡೂಗಿರಿ ಅಲ್ವಾ.? ಇಂದಿನ ಅಜೆಂಡಾದಲ್ಲಿ ಅವಿಶ್ವಾಸ ನಿರ್ಣಯವೇ ಇರಲಿಲ್ಲ. ಅಜೆಂಡಾದಲ್ಲಿ ಎಲ್ಲಾ ಕಲಾಪಗಳು ಮುಗಿದಿವೆ. ಹೀಗಿದ್ದೂ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದು ಬಿಜೆಪಿ. ಇದು ಬಿಜೆಪಿಯ ಗುಂಡಾಗಿರಿಯಾಗಿದೆ. ಕಾಂಗ್ರೆಸ್ ಗುಂಡಾವರ್ತನೆ ತೋರಿಲ್ಲ. ಬಿಜೆಪಿಯವರೇ ನಿಯಮಾವಳಿ ಪಾಲಿಸದೇ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿ ಗೂಂಡಾಗಿರಿಯನ್ನು ಸದನದಲ್ಲಿ ಪ್ರದರ್ಶಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.



