ಬೆಂಗಳೂರು: ಕಾನೂನು ತಜ್ಞರ ಜೊತೆ ಚರ್ಚಿಸಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆಶ್ವಾಸನೆ ನೀಡಿದ್ದಾರೆ.
ಈ ಬಗ್ಗೆ ಶಾಸಕ ರಾಜುಗೌಡ ನಾಯಕ್ ಮಾಹಿತಿ ನೀಡಿದ್ದು, ಇಂದು ನಮ್ಮ ಸಮುದಾಯದ ಮುಖಂಡರು, ಯಡಿಯೂರಪ್ಪನವರೊಂದಿಗೆ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಚರ್ಚೆ ಮಾಡಿದ್ದೇವೆ. ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ನಮ್ಮ ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದೆ. ಹೀಗಾಗಿ ಮೀಸಲಾತಿ ಹೆಚ್ಚಳ ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಐಪಿಎಸ್, ಐಎಎಸ್ ಆದವರ ಮಕ್ಕಳೇ ಮತ್ತೇ ಹುದ್ದೆಗೆ ಸೇರುತ್ತಿದ್ದಾರೆ. ಬಡ ರೈತರ ಮಕ್ಕಳಿಗೂ ಮೀಸಲಾತಿ ಸಿಗಬೇಕೆಂದು ಒತ್ತಾಯಿಸಿದರು.ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಬಾರಿಯಾದರೂ ಏಮ್ಸ್ ಕೊಡುವಂತೆ ಮನವಿ ಮಾಡಿದ್ದೇವೆ. ಹಿಂದೆ ನಮ್ಮ ಭಾಗಕ್ಕೆ ಸಿಕ್ಕಿದ್ದ ಏಮ್ಸ್ ಮತ್ತು ಐಐಟಿಯನ್ನು ಬಿಟ್ಟುಕೊಟ್ಟಿದ್ದೇವೆ. ಈ ಬಾರಿಯಾದರೂ ನಮಗೆ ನ್ಯಾಯ ಸಿಗಬೇಕೆಂದು ಮನವಿ ಮಾಡಿದರು.



