ಬೆಂಗಳೂರಿನ ರವೀಂದ್ರನಾಥ ಟ್ಯಾಗೋರ್ ನಗರದಲ್ಲಿರುವ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿಂದು ಮುಖ್ಯಮಂತ್ರಿ ಶರಣ ಬಸವರಾಜ ಬೊಮ್ಮಾಯಿ ಅವರು ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಆರ್ಶೀವಾದ ಪಡೆದರು.
ಶ್ರೀಗಳ ನೇತೃತ್ವದಲ್ಲಿ ಸಾಕಾರಗೊಂಡಿರುವ ಹತ್ತಾರು ಏತ ನೀರಾವರಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿದರು. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಬಹು ನಿರೀಕ್ಷಿತ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯು ಫೆಬ್ರವರಿ ವೇಳೆಗೆ ಎಲ್ಲಾ ಕೆರೆಗಳಿಗೆ ಗಂಗಾವತರಣವಾಗುವಂತೆ ಅಂತಿಮ ಹಂತದ ಕಾರ್ಯಗಳ ಬಗ್ಗೆ ಸಂಬಂಧಪಟ್ಟವರಿಗೆ ಸೂಕ್ತ ಕ್ರಮ ವಹಿಸುವಂತೆ ಶ್ರೀ ಜಗದ್ಗುರುಗಳವರು ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿದರು.
ಜನವರಿ ಮತ್ತು ಫೆಬ್ರವರಿ 2023 ರಲ್ಲಿ ಕೊಟ್ಟೂರಿನಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ನಿಮಿತ್ತ ಆ ಭಾಗದ ಕೆರೆಗಳಿಗೆ ನೀರು ತುಂಬಿಸುವ ವಿಶೇಷ ಯೋಜನೆ ರೂಪಿಸಲಾಗಿದೆ.ಒಣ ಭೂಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕೊಟ್ಟೂರು ತಾಲ್ಲೂಕಿನ ಕೆರೆಗಳು ಸಮೃದ್ಧಿಯಾದರೆ ರೈತರ ಬಾಳು ಬೆಳಗಲಿದೆ. ಈ ಯೋಜನೆಯ ಅನುಷ್ಠಾನಕ್ಕೆ ಶೀಘ್ರ ಕ್ರಮ ವಹಿಸುವಂತೆ ಶ್ರೀ ಜಗದ್ಗುರುಗಳವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ತರಳಬಾಳು ಕೇಂದ್ರದ ಕಾರ್ಯದರ್ಶಿ ಬಾತಿ ವಿಶ್ವನಾಥ್ ಹಾಜರಿದ್ದರು.