ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು ಇಡಬೇಕೆಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾಳೆ ನಡೆಯಲಿರುವ ಅಧಿವೇಶನದಲ್ಲಿ ಕುವೆಂಪು ಅವರ ಹೆಸರು ಪ್ರಸ್ತಾಪಿಸುತ್ತೇನೆ. ಈ ಹಿಂದೆ ರಾಜ್ಯ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಹೆಸರು ಇಡಬೇಕೆಂದು ನಿರ್ಧರಿಸಿತ್ತು. ಆದರೆ ಇದನ್ನು ಬಿಎಸ್ವೈ ನಿರಾಕರಿಸಿದ್ದರು.
ಇದೀಗ ಮತ್ತೆ ತಮ್ಮ ಹೆಸರು ಬೇಡವೆಂದು ಹೇಳಿರುವ ಅವರು, ಅಧಿವೇಶನದಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ತಮ್ಮ ಹೆಸರಿಡದಂತೆ ಯಡಿಯೂರಪ್ಪ ಮನವಿ ಮಾಡಿದ್ದರು. ಈ ಕುರಿತು ಸಿಎಂ ಬೊಮ್ಮಾಯಿಗೆ ಬಿಎಸ್ವೈ ಪತ್ರ ಬರೆದಿದ್ದರು. ಆದರೂ ಯಡಿಯೂರಪ್ಪನವರ ಹೆಸರನ್ನು ಕೇಂದ್ರಕ್ಕೆ ಕಳಿಸುವುದಾಗಿ ಸಿಎಂ ಹೇಳಿದ್ದರು.
ಕಳೆದ ಹಲವು ದಿನಗಳಿಂದ ಶಿವಮೊಗ್ಗ ಏರ್ಪೋರ್ಟ್ ಹೆಸರು ಚರ್ಚೆಗೆ ಒಳಗಾಗಿತ್ತು. ನಾಮಕರಣ ವಿಚಾರ ರಾಜಕೀಯ ಬಣ್ಣಕ್ಕೂ ತಿರುಗಿತ್ತು. ಈ ಹಿಂದೆ ಹಲವು ಹೆಸರುಗಳು ಕೇಳಿಬಂದಿದ್ದವು. ಆದರೆ ಎಸ್.ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪನವರ ಹೆಸರು ಮುಂಚೂಣಿಯಲ್ಲಿದ್ದವು.
ಇದೇ ತಿಂಗಳ 27ರಂದು ಪ್ರಧಾನಿ ಮೋದಿ ಏರ್ಪೋರ್ಟ್ ಉದ್ಘಾಟನೆ ಮಾಡಲಿದ್ದಾರೆ. ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕತಿ ಕುವೆಂಪು ಅವರ ಹೆಸರನ್ನು ಬಿಎಸ್ವೈ ಫೈನಲ್ ಮಾಡಿದ್ದಾರೆ. ನನ್ನ ಹೆಸರು ಇಡುವುದು ಬೇಡವೆಂದು ಮೊದಲು ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದ ಬಿಎಸ್ವೈ, ಪ್ರಧಾನಿ ಮೋದಿಯವರಿಂದಲೇ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಿಸಲಾಗುವುದು ಎಂದು ಹೇಳಿದ್ದಾರೆ.



