ಡಿವಿಜಿ ಸುದ್ದಿ, ಹೊನ್ನಾಳಿ: ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಾದ್ಯಂತ ಸುರಿದ ಭಾರೀ ಮಳೆಯಿಂದಾಗಿ 15 ಮನೆಗಳಿಗೆ ಹಾನಿಯಾಗಿದೆ.ಕೆಲವು ಮೆಗಳು ಸಂಪೂರ್ಣ ನೆಲ ಕಚ್ಚಿದ್ದು, ಇನ್ನು ಕೆಲವು ಮನೆಗಳಿಗೆ ಸಣ್ಣ ಪ್ರಮಾಣದ ಹಾನಿಯಾಗಿವೆ.
ತಾಲೂಕಿನ ಎಚ್. ಗೋಪಗೊಂಡನಹಳ್ಳಿ, ಮಾವಿಕೋಟೆ ಹಾಗೂ ಮಾದೇನಹಳ್ಳಿ ಗ್ರಾಮಗಳಲ್ಲಿ ತಲಾ 2 ಮನೆಗಳು, ಐನೂರು, ಹರಳಹಳ್ಳಿ ಗ್ರಾಮಗಳಲ್ಲಿ ತಲಾ 1 ಮನೆ, ನ್ಯಾಮತಿ ತಾಲೂಕಿನ ಕೆಂಗೆಟ್ಟೆ ಗ್ರಾಮದಲ್ಲಿ 1 ಮನೆ, ದೊಡ್ಡೆತ್ತಿನಹಳ್ಳಿ ಗ್ರಾಮದಲ್ಲಿ3 ಮನೆಗಳು ಮತ್ತು ಒಂದು ದನದ ಕೊಟ್ಟಿಗೆ ಬಿದ್ದಿವೆ. ಒಟ್ಟು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳಲ್ಲಿ ಸುಮಾರು 10 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ವಿವರ:ಹೊನ್ನಾಳಿ-44.6 ಮಿಮೀ. ಬೆಳಗುತ್ತಿ- 32.8 , ಮಿಮೀ. ಹರಳಹಳ್ಳಿ 85.2 ಮಿಮೀ. ಗೋವಿನಕೋವಿ 83.5 ಸಾಸ್ವೇಹಳ್ಳಿ90.2 ಮಿಮೀ.ಗಳಷ್ಟು ಮಳೆಯಾಗಿದೆ. ಕುಂದೂರು ಭಾಗದಲ್ಲಿ ಸಾಧಾರಣ ಮಳೆಯಾಗಿರುವುದಾಗಿ ವರದಿಯಾಗಿದೆ.
ತಾಲೂಕಿನ ಸಾಸ್ವೇಹಳ್ಳಿ ಹೋಬಳಿಯಲ್ಲಿ ಅತೀ ಹೆಚ್ಚು ಮಳೆಯಾಗಿರುವುದರಿಂದ ಅಡಕೆ ತೋಟ ಹಾಗೂ ಭತ್ತದ ಗದ್ದೆಗಳಿಗೆ ಮಳೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ಆದರೆ, ಮಳೆಯಿಂದ ನಷ್ಟ ಆದ ಬೆಳೆಗಳ ಬಗ್ಗೆ ಯಾವುದೇ ಮಾಹಿತಿ ಇನ್ನೂ ಸಿಕ್ಕಿಲ್ಲ.
ಮುಂದಿನ ಮೂರು ದಿನಗಳಲ್ಲಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳಾದ್ಯಂತ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವುದರಿಂದ ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ತುಂಗಭದ್ರಾ ನದಿಪಾತ್ರದಲ್ಲಿ ಇದ್ದು, ಜನ-ಜಾನುವಾರುಗಳು ನದಿ ಕಡೆ ಹೋಗದಂತೆ ಎಚ್ಚರಿಕೆ ನೀಡಬೇಕು. ನದಿ ಪಾತ್ರದಲ್ಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಡಂಗುರ ಸಾರಿಸಬೇಕು ಎಂದು ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ಸೂಚನೆ ನೀಡಿದ್ದಾರೆ.



