ಬಳ್ಳಾರಿ: ಜಿಲ್ಲೆಯ ಒಬ್ಬ ಶಾಸಕರ ಸ್ವಾರ್ಥಕ್ಕೆ ವಿಜಯನಗರ ಜಿಲ್ಲೆ ರಚನೆಯಾಗುತ್ತಿದೆ. ಸರ್ಕಾರ ಶಾಸಕರ ಸ್ವಾರ್ಥಕ್ಕೆ ಬೆಂಬಲವಾಗಿ ನಿಂತಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಬೀಳಿಸಿದ್ದಕ್ಕೆ ವಿಜಯನಗರ ಜಿಲ್ಲೆ ಗಿಫ್ಟ್ ಆಗಿ ನೀಡಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್, ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೆಸರು ಹೇಳದೆ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ನೆರವು ನೀಡಿದ್ದಕ್ಕೆ ವಿಜಯನಗರ ಜಿಲ್ಲೆಯ ಗಿಫ್ಟ್ ಆಗಿ ನೀಡಿದ್ದು, ವಿಜಯನಗರ ಜಿಲ್ಲೆ ರಚನೆಗೆ ಯಾವುದೇ ಆಡಳಿತಾತ್ಮಕ ಕಾರಣಗಳಿಲ್ಲ. ಬಳ್ಳಾರಿ ನಗರದ ಹೊರವಲಯದಲ್ಲಿ ಆಂಧ್ರ ಗಡಿ ಇದೆ. ಭಾಷಾ ವಿವಾದ ಇರಬಾರದು ಎಂಬ ಕಾರಣಕ್ಕೆ ಬಳ್ಳಾರಿ ಕೇಂದ್ರ ಸ್ಥಾನವನ್ನಾಗಿ ಮಾಡಿ ದೊಡ್ಡ ಜಿಲ್ಲೆ ರಚಿಸಲಾಗಿತ್ತು. ಬಿಜೆಪಿ ಸರ್ಕಾರ ಅಂದಿನ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ ಎಂದರು.
ವಿಜಯನಗರ ಸಾಮ್ರಾಜ್ಯ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಬೃಹತ್ ವ್ಯಾಪ್ತಿ ಒಳಗೊಂಡಿತ್ತು. ಇತಿಹಾಸ ತಿಳಿಯದವರು ಹಂಪಿ ಸುತ್ತಮುತ್ತಲಿನ ಪ್ರದೇಶವನ್ನೇ ವಿಜಯನಗರ ಸಾಮ್ರಾಜ್ಯ ಎಂದುಕೊಂಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲೆಯ ಶಾಸಕರು, ಸಂಸದರ ಸಭೆ ಕರೆದಿದ್ದಾಗ ಬಿಜೆಪಿ ಶಾಸಕರನ್ನು ಒಳಗೊಂಡಂತೆ ಶೇ.90 ಜನಪ್ರತಿನಿಧಿಗಳು ಜಿಲ್ಲೆ ವಿಭಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಬಳ್ಳಾರಿ ಜಿಲ್ಲೆಗೆ ವಿಜಯನಗರ ಎಂದು ಮರುನಾಮಕರಣ ಮಾಡುವಂತೆ ಒತ್ತಾಯ ಕೂಡ ಮಾಡಲಾಗಿತ್ತು.
ಯಾವುದೇ ಚರ್ಚೆ ಇಲ್ಲದೆ ವಿಜಯನಗರ ಜಿಲ್ಲೆ ಘೋಷಿಸಲಾಗಿದೆ. ಸರ್ಕಾರದ ತೀರ್ಮಾನಕ್ಕೆ ನಮ್ಮ ವಿರೋಧ ಇದೆ. ಅಖಂಡ ಜಿಲ್ಲೆ ಇರಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಹಂಪಿ ಹಾಗೂ ತುಂಗಭದ್ರಾ ಜಲಾಶಯ ಬಿಟ್ಟುಕೊಡಲು ಸಾಧ್ಯವೇ ಇಲ್ಲ. ಬಿಜೆಪಿ ಶಾಸಕರು ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಸೈಯದ್ ನಾಸೀರ್ ಹುಸೇನ್ ಆಗ್ರಹಿಸಿದರು.
ಕೆಪಿಸಿಸಿ ಮಾಧ್ಯಮ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಮಾತನಾಡಿ, ಬಿಜೆಪಿ ಸರ್ಕಾರ ಜಿಲ್ಲೆ ವಿಭಜನೆಗೆ ಜನಾಭಿಪ್ರಾಯ ಪಡೆದಿದೆಯಾ. ಜಿಲ್ಲೆ ವಿಭಜನೆ ಮಾಡಲು ಹೊರಟಿದೆ. ಅಭಿವೃದ್ಧಿ ಒಂದೇ ಕಾರಣ ಎನ್ನುವುದಾದರೆ ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆಗೆಯಲು, ಸಮನಾಂತರ ಜಲಾಶಯ ನಿರ್ಮಾಣಕ್ಕೆ ಯಾಕೆ ಆದ್ಯತೆ ನೀಡಿಲ್ಲ ಎಂದು ಪ್ರಶ್ನಿಸಿದರು.



