ಡಿವಿಜಿ ಸುದ್ದಿ, ಹಾಸನ: ಯಡಿಯೂರಪಪ್ಪ ಪುತ್ರ ವಿಜಯೇಂದ್ರ ಸೂಪರ್ ಸಿಎಂ ಅಲ್ಲ, ಮುಂದೊಂದು ದಿನ ಸಿಎಂ ಆಗ್ತಾರೆ ಎಂದು ಶಾಸಕ ಪ್ರತೀತಂ ಗೌಡ ಭವಿಷ್ಯ ನುಡಿದರು
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಜಯೇಂದ್ರ ಅವರ ಪ್ರಭಾವ ಹೆಚ್ಚಾಗುತ್ತಿದ್ದು, ರಾಜ್ಯದ ನಾಯಕತ್ವ ವಹಿಸಿಕೊಳ್ಳಲು ಮುಂದಾಳತ್ವದಲ್ಲಿ ಬರುತ್ತಿದ್ದಾರೆ. ಅವರು ಬೆಳೆಯುತ್ತಿದ್ದಾರೆ ಎಂದು ವಿರೋಧ ಪಕ್ಷದವರು ಹೀಗೆ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿಎಂ ಆಗುವ ಎಲ್ಲ ಅರ್ಹತೆ ಮತ್ತು ಯೋಗ್ಯತೆಯನ್ನು ಅವರು ಇಟ್ಟುಕೊಂಡಿದ್ದಾರೆ, ಹೀಗಾಗಿ ಅವರು ಸೂಪರ್ ಸಿಎಂ ಅಲ್ಲ, ಸಿಎಂ ಆಗ್ತಾರೆ ಎಂದರು.

ಯಡಿಯೂರಪ್ಪ ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ. ಮುಂದಿನ ಚುನಾವಣೆ ಕೂಡ ಅವರ ನೇತೃತ್ವದಲ್ಲಿ ನಡೆಯುತ್ತದೆ. ಮುಖ್ಯಮಂತ್ರಿ ಬದಲಾವಣೆ ಚರ್ಚೆಯಿಂದ ಯಾರಿಗೆ ಖುಷಿಯಾಗುತ್ತೋ ಅವರೇ ಇದನ್ನೆಲ್ಲ ಹುಟ್ಟುಹಾಕಿದ್ದಾರೆ. ಮಾಧ್ಯಮದ ಸ್ನೇಹಿತರು ಇದನ್ನು ಆರೋಗ್ಯಕರವಾಗಿ ಚರ್ಚೆ ಮಾಡುತ್ತಿದ್ದಾರೆ ಅಷ್ಟೇ ಎಂದರು.
ಇಂತಹ ಚರ್ಚೆಗೆ ಪ್ರೋತ್ಸಾಹ ಕೊಡಲು ಒಬ್ಬರೂ ಶಾಸಕರಿರುವುದಿಲ್ಲ. ಎಲ್ಲಾ ಶಾಸಕರು ಸಿಎಂ ಅವರ ಹಿಂದೆ ಇದ್ದೇವೆ. ವಿವಿಧ ಅಭಿವೃದ್ಧಿ ಕಾಮಗಾರಿಗೆ ಕೇಂದ್ರದಿಂದ ಹಣ ತರುವ ಯೋಜನೆಯೊಂದಿಗೆ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿದ್ದಾರೆ ಅಷ್ಟೇ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳು, ವರಿಷ್ಠರಿಗೆ ಬಿಟ್ಟ ವಿಚಾರ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಸ್ಪಷ್ಟಪಡಿಸಿದರು.



