ಡಿವಿಜಿ ಸುದ್ದಿ, ವಿಜಯಪುರ: ಯಡಿಯೂರಪ್ಪ ಉತ್ತರಾಧಿಕಾರಿ ಹುಡುಕಾಟದಲ್ಲಿರುವ ಬಿಜೆಪಿ, ಕಾಂಗ್ರೆಸ್ ನ ಪ್ರಭಾವಿ ನಾಯಕ, ಉತ್ತರ ಕರ್ನಾಟಕ ಲಿಂಗಾಯತ ನಾಯಕನಿಗೆ ಬಿಜೆಪಿ ಗಾಳ ಹಾಕಿದೆ.
ವಿಜಯಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರ ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಂ.ಬಿ.ಪಾಟೀಲ, ಲಿಂಗಾಯತ ಸಮಾಜದ ಪ್ರಭಾವಿ ನಾಯಕ. ಈ ನಾಯಕನನ್ನು ಸೆಳೆಯಲು ಬಿಜೆಪಿ ಗಾಳ ಹಾಕಿದೆ. ಇದಲ್ಲದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತಾರಾಧಿಕಾರಿಯಾಗಿಯೂ ಬಿಂಬಿಸುವ ಆಫರ್ ಅನ್ನು ಎಂ.ಬಿ. ಪಾಟೀಲರಿಗೆ ಬಿಜೆಪಿ ಹೈಕಮಾಂಡ್ ನೀಡಿದ್ದಾರೆ ಎಂದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಈ ಆಮಿಷ ಬಗ್ಗೆ ಎಂ.ಬಿ.ಪಾಟೀಲ ಒಲವು ತೋರಿಲ್ಲ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ಎಂ.ಬಿ.ಪಾಟೀಲ, ನನ್ನನ್ನು ಇತರೆ ಪಕ್ಷಗಳು ಸಂಪರ್ಕಿಸಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದು ಆಧಾರ ರಹಿತ, ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ.
ನನ್ನನ್ನು ಇತರೆ ಪಕ್ಷಗಳು ಸಂಪರ್ಕಿಸಿವೆ ಎಂಬ ಕಾಲ್ಪನಿಕ ವರದಿಯನ್ನು ಇತ್ತೀಚಿಗೆ ಮಾಧ್ಯಮದಲ್ಲಿ ನಾನು ಗಮನಿಸಿದ್ದೇನೆ. ಈ ವರದಿ ಸಂಪೂರ್ಣವಾಗಿ ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾದದ್ದು.
— M B Patil (@MBPatil) October 10, 2020



