ಡಿವಿಜಿ ಸುದ್ದಿ, ಬೆಂಗಳೂರು: ಈ ಉಪ ಚುನಾವಣೆ ಮುಗಿದ ಮೇಲೆ ಬಂಡೆ ಛಿದ್ರವಾಗತ್ತೆ. ಹುಲಿಯಾ ಕಾಡಿಗೆ ಹೋಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಆರ್ ಆರ್ ನಗರದಲ್ಲಿ ಮಾತನಾಡಿದ ಅವರು, ಚುನಾವಣಾ ಅಖಾಡ ಬಿಸಿಯಾಗಿದೆ. ಕಾಂಗ್ರೆಸ್, ಜೆಡಿಎಸ್ ನಲ್ಲಿ ತಳಮಳ ಶುರುವಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಘಟಾನುಘಟಿ ನಾಯಕರು ಬಿಜೆಪಿ ಸೇರುತ್ತಾರೆ ಹಲವು ಕಾಂಗ್ರೆಸ್, ಜೆಡಿಎಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಪೂರ್ಣ ಬಹುಮತ ಇದ್ದಾಗಲೂ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಟಿಪ್ಪು ಜಯಂತಿ ಮೂಲಕ ಸಮಾಜ ಒಡೆಯುವ ಮತ್ತು ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಕೆಲಸ ಸಿದ್ದರಾಮಯ್ಯ ಸರ್ಕಾರದಲ್ಲಿ ಆಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ದೇವೇಗೌಡರ ಕುಟುಂಬಕ್ಕೆ ಸಾಧ್ಯವಾಗುವಷ್ಟು ತೊಂದರೆ ಕೊಟ್ಟರು ಎಂದರು.
ಅಧಿಕಾರ ಇದ್ದಾಗ ಒಂದು, ಇಲ್ಲದಿದ್ದಾ ಇನ್ನೊಂದು. ಅಪ್ಪ , ಮಗ ಒಂದೊಂದು ರೀತಿ ಅಧಿಕಾರ ಬೇಕಾದಾಗ ಪ್ರೇಮ ವಿವಾಹ ಆಗ್ತಾರೆ. ಆಮೇಲೆ ಬೈದಾಡಿಕೊಳ್ತಾರೆ. ಅಪ್ಪ ಒಂದು ಪಕ್ಷದ ಪರ ಮಾತಾಡ್ತಾರೆ. ಮಗ ಒಂದು ಪಕ್ಷದ ಪರ ಮಾತಾಡ್ತಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ವ್ಯಂಗ್ಯ ಮಾಡಿದರು.
ಕಾಂಗ್ರೆಸ್ನ ಗೂಂಡಾಗಿರಿ ರಾಜಕೀಯ ಕಂಡು, ಬೇಸತ್ತು ಇಂದು ಪ್ರಮುಖರು ಬಿಜೆಪಿ ಸೇರ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಪ್ರಮುಖ ನಾಯಕರು ಬಿಜೆಪಿ ಸೇರ್ತಾರೆ. ಹಲವು ಪ್ರಮುಖರು ಬಿಜೆಪಿಯ ಕದ ತಟ್ತಾ ಇದ್ದಾರೆ ಎಂದು ಹೊಸ ಬಾಂಬ್ ಹಾಕಿದರು.



