ನವದೆಹಲಿ: ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ಮಸೂದೆಯನ್ನು ಬಹುಜನ ಸಮಾಜ ಪಕ್ಷ(ಬಿಎಸ್ ಪಿ) ಬೆಂಬಲಿಸಿದೆ. ಇದಲ್ಲದೆ, ಈ ಕ್ರಮ ವಿರೋಧಿಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ.
ಜಮ್ಮು ಮತ್ತು ಕಾಶ್ಮೀರ ಮಸೂದೆ ಕುರಿತ ಚರ್ಚೆಯಲ್ಲಿ ಮಾತನಾಡಿದ ಬಿಎಸ್ ಪಿ ಸಂಸದ ಮಲೂಕ್ ನಗರ್ , ನಮ್ಮ ಪಕ್ಷ ಬಡವರು, ದಲಿತರು, ವಂಚಿತ ಸಮುದಾಯಗಳ ಪರವಾಗಿದೆ. ಕಾಶ್ಮೀರದಲ್ಲಿ 2019ರಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ಗುಜ್ಜರ್ ಮತ್ತು ಬ್ಯಾಕರ್ವಾಲ್ ಸಮುದಾಯಕ್ಕೆ ಮೀಸಲಾತಿ ಸಿಗುತ್ತಿದೆ. ಗುಜ್ಜರ್ ಮತ್ತು ಬ್ಯಾಕರ್ವಾಲ್ ನಂತಹ ಹಿಂದುಳಿದ ಸಮುದಾಯಗಳು ಕಾಶ್ಮೀರದಲ್ಲಿ ಮೀಸಲಾತಿ ಹಕ್ಕುಗಳಿಂದ ವಂಚಿತರಾಗಿದ್ದರು. ಆದರೆ ಈಗ ಅವರು ತಮ್ಮ ಹಕ್ಕುಗಳನ್ನು ಪಡೆಯುತ್ತಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಡ ಮನೆಗಳಲ್ಲಿ ಊಟ ಮಾಡುತ್ತಾರೆ. ಆದರೆ ಕೇಂದ್ರದ ಬಡವರ ಪರವಾದ ನೀತಿಗಳನ್ನು ವಿರೋಧಿಸ್ತಾರೆ ಎಂದು ವಾಗ್ದಾಳಿ ನಡೆಸಿದರು.



