ಮಂತ್ರಾಲಯದಲ್ಲಿ ಆ.10ರಿಂದ 16ರವರೆಗೆ ಆರಾಧನಾ ಮಹೋತ್ಸ
ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ. 10ರಿಂದ 16ರವರೆಗೆ ಶ್ರೀರಾಯರ 351ನೇ ಆರಾಧನಾ ಮಹೋತ್ಸವದ ನಿಮಿತ್ತ ಸಪ್ತರಾತ್ರೋತ್ಸವ ಜರಗಲಿದೆ ಎಂದು ಶ್ರೀಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಕೋವಿಡ್-19 ಕಾರಣಕ್ಕೆ ರಾಯರ ಆರಾಧನೆಯನ್ನು ಸರಳವಾಗಿ ಆಚರಿಸಲಾಗಿತ್ತು. ಈಗ ಸೋಂಕು ನಿವಾರಣೆಯಾಗಿದ್ದು, ಜನಜೀವನ ಎಂದಿನಂತಿದೆ. ಆರಾಧನೆ ವೇಳೆ ಸರಕಾರಿ ರಜೆಗಳಿರುವುದರಿಂದ ಈ ಬಾರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಅನುಗ್ರಹ ಪ್ರಶಸ್ತಿ ಪ್ರದಾನ
ಮಠದ ಮುಂದಿನ ಯೋಗೀಂದ್ರ ಸಭಾಮಂಟಪದಲ್ಲಿ ಪ್ರತೀದಿನವೂ ವಿದ್ವಾಂಸರಿಂದ ಪ್ರವಚನ, ಉಪನ್ಯಾಸ, ವಿವಿಧ ಸಂಗೀತ ಕಲಾವಿದರಿಂದ ದಾಸವಾಣಿ ಕಾರ್ಯಕ್ರಮ, ಭರತನಾಟ್ಯ, ನೃತ್ಯ ರೂಪಕ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಹಲವು ಸಾಧಕರಿಗೆ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಕಾರಿಡಾರ್ ಲೋಕಾರ್ಪಣೆ
ಈ ಬಾರಿಯೂ ಶ್ರೀಮಠದ ಭಕ್ತರ ನೆರವಿನೊಂದಿಗೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಲೋಕಾರ್ಪಣೆ ಮಾಡಲಾಗುವುದು. ಶ್ರೀಮಠದ ಮುಂಭಾಗದಲ್ಲಿ ಬೃಹತ್ ಕಾರಿಡಾರ್ ನಿರ್ಮಿಸಿದ್ದು, ಲೋಕಾರ್ಪಣೆ ಮಾಡಲಾಗುವುದು. ಈ ಬಾರಿ ರಾಯರ ಮೂಲವೃಂದಾವನಕ್ಕೆ ನವರತ್ನ ಖಚಿತ ಹಾರ, 300 ಕೆಜಿಯ ರಜತ ಮಂಟಪ, ಸುವರ್ಣ ರಥದ ನವೀಕರಣ ಮಾಡಲಾಗಿದೆ. ಹರಿಕಥಾಮೃತಸಾರ ಸೌಧ ನಿರ್ಮಿಸಲಾಗಿದೆ. ಭಕ್ತರಿಗಾಗಿ 100 ಕೋಣೆಗಳ ಸಮುತ್ಛಯ ನಿರ್ಮಿಸಲಾಗುತ್ತಿದೆ. ಒಬ್ಬರೇ ದಾನಿಗಳು ಇದನ್ನು ನಿರ್ಮಿಸುತ್ತಿದ್ದಾರೆ ಎಂದರು.



