ದಾವಣಗೆರೆ: ಯಾವುದೇ ಪರವಾನಗಿ ಇಲ್ಲದೆ, ಆಂಧ್ರ, ತೆಲಂಗಾಣದಿಂದ ದಾವಣಗೆರೆಗೆ ಸ್ಫೋಟಕ ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ರಾಜ್ಯದ ಮಹಬೂಬ್ ನಗರ ಜಿಲ್ಲೆಯ ರಾಮರೆಡ್ಡಿ ಹಾಗೂ ಆಂಧ್ರಪ್ರದೇಶದ ಕರ್ನೂಲ್ ನಗರದ ಅನುಮುಲ್ ಶಿವಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಜಿಲ್ಲೆಯ ಕಾಡಜ್ಜಿ ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸ್ಫೋಟಕ ವಸ್ತುಗಳನ್ನು ಇತ್ತೀಚೆಗೆ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣ ಜಾಡು ಹಿಡಿದು ಹೋರಟ ಜಿಲ್ಲಾ ಪೊಲೀಸರು, ರಾಯಚೂರು ಜಿಲ್ಲೆಯ ಮಾನ್ವಿಯ ಒಬ್ಬನ್ನು ಬಂಧಿಸಿದ್ದರು. ಮಾನ್ವಿಯ ವ್ಯಕ್ತಿಗೆ ತೆಲಂಗಾಣದಿಂದ ಸ್ಫೋಟಕ ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಹೈದರಾಬಾದ್ ಮತ್ತು ಕರ್ನೂಲ್ ನಗರದಲ್ಲಿ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ನರಸಿಂಹ.ವಿ. ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿಐ ಲಿಂಗನಗೌಡ ನೆಗಳೂರು, ಪಿಎಸ್ಐ ಪುಷ್ಪಲತಾ, ಸಿಬ್ಬಂದಿ ದೇವೆಂದ್ರನಾಯ್ಕ, ಮಂಜನಗೌಡ, ಮಹೇಶ್ ತಂಡದಲ್ಲಿದ್ದರು. ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.