ಬೆಂಗಳೂರು: ಸಹಕಾರಿ ಸಂಘದ ಸದಸ್ಯರು, ರೈತರಿಗೆ ಸರ್ಕಾರವು ಯಶಸ್ವಿನಿ ಯೋಜನೆಯಡಿ ಹೊಸ ಸದಸ್ಯರನ್ನು ನೋಂದಾಯಿಸಲು ನಿರ್ಧರಿಸಿದ್ದು, ನೋಂದಾಯಿಸಿಕೊಳ್ಳವ ಕೊನೆಯ ದಿನವನ್ನು ಜ.31ರವರೆಗೆ ವಿಸ್ತರಿಸಿದೆ.
ಸಹಕಾರಿಗಳು, ಶಾಸಕರು, ವಿಧಾನಪರಿಷತ್ ಸದಸ್ಯರ ಕೋರಿಕೆ ಮೇರೆಗೆ ರಾಜ್ಯ ಸರ್ಕಾರ, ಜನವರಿ 31ರವರೆಗೆ ಹೊಸ ಸದಸ್ಯರನ್ನು ನೋಂದಾಯಿಸುವ ಅವಕಾಶ ವಿಸ್ತರಿಸಿದೆ ಎಂದು ಸಹಕಾರ ಇಲಾಖೆ, ಆದೇಶದಲ್ಲಿ ತಿಳಿಸಿದೆ. ಪ್ರಸಕ್ತ ಸಾಲಿಗೆ, 30 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಇದಕ್ಕೂ ಮುನ್ನ ಡಿ.31 ಕೊನಯ ದಿನವಾಗಿತ್ತು. ಇದೀಗ ಈ ಅವಧಿಯನ್ನು ಒಂದು ತಿಂಗಳು ವಿಸ್ತರಿಸಿದೆ.
ಈ ಯೋಜನೆಯಡಿ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ರೂ. ವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು. ರಾಜ್ಯ ಸರ್ಕಾರವು ಇದಕ್ಕಾಗಿ ಪ್ರಸಕ್ತ ಆಯವ್ಯಯದಲ್ಲಿ 300 ಕೋಟಿ ರೂ. ಅನುದಾನ ನಿಗದಿ ಪಡಿಸಿದೆ.
ಗ್ರಾಮೀಣ ಸಹಕಾರ ಸಂಘಗಳ, ಸ್ವ-ಸಹಾಯ ಗುಂಪುಗಳ ಗರಿಷ್ಟ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.500/- ಗಳ ವಂತಿಗೆ ಮತ್ತು ಹೆಚ್ಚುವರಿ ಪ್ರತಿಯೊಬ್ಬ ಸದಸ್ಯರಿಗೆ ರೂ.100/-ಗಳನ್ನು ಪಾವತಿಸಬೇಕು. ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ರೂ.1,000/- ಗಳ ವಂತಿಗೆ ಮತ್ತು ಹೆಚ್ಚುವರಿ ಪ್ರತಿಯೊಬ್ಬ ಸದಸ್ಯರಿಗೆ ರೂ.200/- ಗಳನ್ನು ಪಾವತಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ.



