ಬೆಂಗಳೂರು: ರಾಜ್ಯದಲ್ಲಿ ತೀವ್ರ ಬಿಸಿಗಾಳಿ ಮುಂದುವರಿದಿದ್ದು, ಗರಿಷ್ಠ ಉಷ್ಣಾಂಶ ಗುರುವಾರ (ಮೇ 02) ನಾಲ್ಕು ಜಿಲ್ಲೆಗಳಲ್ಲಿ 46 ಡಿಗ್ರಿ ಸೆಲ್ಸಿಯಸ್ ದಾಟಿದೆ. ಮಂಡ್ಯದಲ್ಲಿ ದಾಖಲೆಯ 47.6 ಡಿಗ್ರಿ ಸೆಲ್ಸಿಯಸ್, ರಾಯಚೂರಿನಲ್ಲಿ 46.7 ಡಿಗ್ರಿ ಸೆಲ್ಸಿಯಸ್, ಕಲಬುರಗಿಯಲ್ಲಿ 46.1 ಡಿಗ್ರಿ ಸೆಲ್ಸಿಯಸ್ ಹಾಗೂ ಯಾದಗಿರಿಯಲ್ಲಿ 46 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ವರದಿಯಾಗಿದೆ. ಈ ಉಷ್ಣಾಂಶ ರಾಜ್ಯದಲ್ಲಿ ಕಳೆದ 7 ವರ್ಷಕ್ಕೆ ಹೋಲಿಸಿದರ ಅತಿ ಹೆಚ್ಚು ದಾಖಲೆಯಾಗಿದೆ
ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ತಾಪಮಾನದಿಂದ ಜನ ತತ್ತರಿಸಿ ಹೋಗಿದ್ದಾರೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ರಾಜ್ಯಾದ್ಯಂತದಿನದಿಂದ ದಿನಕ್ಕೆ ಬೇಸಿಗೆಯ ತಾಪ ಏರುತ್ತಿದ್ದು, ಇದು ಆರೋಗ್ಯದ ಮೇಲೂ ಪ್ರಭಾವ ಬೀರುತ್ತಿದೆ. ಅತಿ ಸುಸ್ತು, ತಲೆಸುತ್ತಿನಂತಹ ಲಕ್ಷಣಗಳಿಗೆ ಎಲ್ಲಾ ವಯೋಮಾನದವರು ಒಳಗಾಗುತ್ತಿದ್ದಾರೆ.ಇದನ್ನು ನಿರ್ಲಕ್ಷಿಸಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ದೇಹದ ರಕ್ತ ಪರಿಚಲನೆಯಲ್ಲಿ ವ್ಯತ್ಯಾಸವಾಗಿ ಹೃದಯಾಘಾತ, ಸ್ಟ್ರೋಕ್ನಂತಹ ಸಮಸ್ಯೆಗಳಿಗೆ ತುತ್ತಾಗಬಹುದು. ಆದ್ದರಿಂದ ಬಿಸಿಲ ಸಂಬಂಧಿ ದೇಹದಲ್ಲಾಗುವ ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ.
25 ಜಿಲ್ಲೆಯಲ್ಲಿ ಶಾಖದ ಅಲೆಯ ಎಚ್ಚರಿಕೆ: ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ತೀವ್ರ ಬಿಸಿಗಾಳಿ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಬಳ್ಳಾರಿ, ಕಲಬುರಗಿ, ವಿಜಯಪುರ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿ ಸೇರಿ 25 ಜಿಲ್ಲೆಗಳಲ್ಲಿ ಮೇ 5ರವರೆಗೆ ಶಾಖದ ಅಲೆಯ ವಾತಾವರಣ ಹೆಚ್ಚಾಗಿರುತ್ತದೆ.ಮುಂದಿನ 5 ದಿನಗಳವರೆಗೆ ಕರ್ನಾಟಕದ ಉತ್ತರ ಒಳಭಾಗದಲ್ಲಿ ರಾತ್ರಿಯಲ್ಲಿಯೂ ಬಿಸಿಗಾಲಿ ಇರಲಿದೆ.



