ಬೆಳಗಾವಿ; ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಮಹಾ 24ನೇ ಅಧಿವೇಶನದಲ್ಲಿ ಜನಗಣತಿ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಬದಲು ವೀರಶೈವ, ಲಿಂಗಾಯತ ಎಂದು ಬರೆಸುವ ನಿರ್ಣಯವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಇದಕ್ಕೆ ಆರ್ ಎಸ್ ಎಸ್, ಬಿಜೆಪಿ ನಿಲುವೇನು..? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಯಿಸಬೇಕು ಎಂಬ ನಿರ್ಣಯ ಬಗ್ಗೆ ಬಿಜೆಪಿ, ಆರ್ಎಸ್ಎಸ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪಂಚಾಚಾರ್ಯರು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ವೀರಶೈವ ಮಹಾಸಭಾ ಸ್ಥಾಪನೆಯಾದ ದಿನದಿಂದ ರಾಜಕೀಯ ಅನುಕೂಲಕ್ಕೆ ತಕ್ಕಂತೆ ತನ್ನ ನಿಲುವು ಬದಲಿಸಿಕೊಂಡಿದ್ದಾರೆ. ಪಂಚಾಚಾರ್ಯರು 2017ರಲ್ಲಿ ಲಿಂಗಾಯತರ ಸ್ವತಂತ್ರ ಧರ್ಮ ಹೋರಾಟ ವಿರೋಧಿಸಿದ್ದರು. ವೀರಶೈವವು ಹಿಂದೂ ಧರ್ಮದ ಅವಿಭಾಜ್ಯ ಅಂಗ ಎಂದಿದ್ದರು. ಈಗ, ಈ ನಿರ್ಣಯ ಖಂಡಿಸುತ್ತಾರೋ ಅಥವಾ ಅದರ ವಿರುದ್ಧ ಹೋರಾಟ ನಡೆಸುವರೇ ಹಾಗೂ ಸಮಸ್ತ ಲಿಂಗಾಯತ ಭಾವನೆ ಒಪ್ಪುವರೇ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಿಬೇಕು ಎಂದು ಒತ್ತಾಯಿಸಿದರು.
2017ರಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಹತ್ತಿಕ್ಕಲು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಪಂಚಾಚಾರ್ಯರೊಂದಿಗೆ ಕೈಜೋಡಿಸಿದ್ದರು. ಆದರೆ, ದಾವಣಗೆರೆ ಅಧಿವೇಶನ ನಿರ್ಣಯವನ್ನು ಯಡಿಯೂರಪ್ಪ ಒಪ್ಪುವರೇ..? ನಾವು ಚಳವಳಿ ಮಾಡಿದಾಗ ವೀರಶೈವ ಮಹಾಸಭಾ, ಪಂಚಾಚಾರ್ಯರು ಮತ್ತು ಬಿಜೆಪಿ ವಿರೋಧಿಸಿತ್ತು. ಇನ್ನೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್ ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ ವಿರೋಧಿಸಿದ್ದರು ಎಂದರು.



