ಬೆಂಗಳೂರು: ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಇದಕ್ಕೆ ಕಾಂಗ್ರೆಸ್ ವಲಯದಲ್ಲಿ ಪರ ವಿರೋಧ ಚರ್ಚೆಗಳು ನಡೆದಿದ್ದವು. ಇದೀಗ ಸಾಕಷ್ಟು ಚರ್ಚೆ ಶುರುವಾಗಿತ್ತು. ಇದಕ್ಕೆ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಪ್ರತಿಕ್ರಿಯೆ ನೀಡಿದ್ದು, ಲಿಂಗಾಯತ ಅಧಿಕಾರಿಗಳಿಗೆ ಇಂತಹ ಯಾವುದೇ ಸಮಸ್ಯೆ ಆಗಿಲ್ಲ ಎಂದು ನಿರಾಕರಿಸಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿ,ಅವರ ವೈಯಕ್ತಿಕ ವಿಚಾರ ಏನೂ ಅಂತ ಗೊತ್ತಿಲ್ಲ. ಈ ವಿಚಾರವಾಗಿ ತಂದೆಯವರ ಜೊತೆಗೆ ನಾನು ಮಾತನಾಡಿಲ್ಲ. ದಾವಣಗೆರೆ ಡಿಸಿ ಎಲ್ಲರನ್ನೂ ಬದಲಾವಣೆ ಮಾಡಿದಂತೆ ವರ್ಗಾವಣೆ ಮಾಡಿದ್ದಾರೆ. ಲಿಂಗಾಯತ ಅಧಿಕಾರಿಗಳ ಸಮಸ್ಯೆ ಬಗ್ಗೆ ಶಾಮನೂರು ಶಿವಶಂಕರಪ್ಪ ಅವರ ಬಳಿಯೇ ಕೇಳಿ. ಇದು ಮುಗಿದು ಹೋದ ಅಧ್ಯಾಯ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಶಾಮನೂರು ಮಾತಾಡಿಕೊಳ್ತಾರೆ. ಡಿಸಿ ವರ್ಗಾವಣೆ ಗೊಂದಲ ವಿಷಯ ನನಗಂತೂ ಗೊತ್ತಿಲ್ಲ ಎಂದು ಹೇಳಿದರು.
ಶಾಮನೂರು ಹೇಳಿಕೆಯನ್ನು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ನಿರಾಕರಿಸಿದ್ದರು. ಅಲ್ಲದೆ, ಜಾತಿವಾರು ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು.ಇನ್ನು ಹಿರಿಯ ನಾಯಕ ಶಾಮನೂರು ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಾಥ್ ನೀಡಿದ್ದರು.



