ಬೆಂಗಳೂರು: ರಾಜ್ಯದಲ್ಲಿ ಮೃತಪಟ್ಟವರ ಹೆಸರಿನಲ್ಲಿರುವ 51.13 ಲಕ್ಷ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ನೋಂದಣಿ ಮಾಡಿಕೊಡಲು ಕಂದಾಯ ಇಲಾಖೆ ಮುಂದಾಗಿದೆ. ಈ ಮೂಲಕ ಸರ್ಕಾರ ಪೌತಿ ಆಂದೋಲನ ಕೈಗೊಂಡಿದೆ.
ಪೌತಿ ಖಾತೆ ಅಂದರೇನು..?
ಮರಣ ಹೊಂದಿದ ವ್ಯಕ್ತಿ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ವಾರಸುದಾರರ ಅಥವಾ ಕುಟುಂಬಸ್ಥರ ಯಾವುದೇ ವ್ಯಕ್ತಿಯ ಹೆಸರಿಗೆ ಜಮೀನು ಖಾತೆ ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎಂದು ಕರೆಯಲಾಗುತ್ತದೆ. ಕೆಲ ಆಸ್ತಿಗಳಿಗೆ ಈಗ ಎರಡು ಅಥವಾ ಮೂರನೇ ತಲೆಮಾರಿನವರು ವಾರಸುದಾರರಾಗಿದ್ದರೆ. ಇನ್ನೂ ಕೆಲ ಆಸ್ತಿಗಳಿಗೆ ನಾಲ್ಕನೇ ತಲೆಮಾರಿನವರ ಮಾಲೀಕತ್ವವಿದೆ. ಅಂಥವರ ಮನೆಗೆ ಗ್ರಾಮ ಲೆಕ್ಕಾಧಿಕಾರಿಗಳು (ವಿಎ) ಭೇಟಿ ನೀಡಿ ಪೌತಿ ಖಾತೆ ಮಾಡಿಸಿಕೊಡುವ ಕೆಲಸ ಸರ್ಕಾರ ಮಾಡಲಿದೆ.
ಪೌತಿ ಖಾತೆ ಮಾಡಿಸದಿದ್ದರೆ ಏನು ಸಮಸ್ಯೆ..?
ಆಸ್ತಿ ಮಾಲೀಕರು ನಿಧನ ಹೊಂದಿದ ಬಳಿಕ ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಳ್ಳದಿದ್ದರೆ ಜಮೀನುಗಳ ಸ್ವಾಧೀನ ಹೊಂದಿದ್ದರೂ ಉಪಯೋಗವಿಲ್ಲದಂತೆ ಆಗುತ್ತದೆ. ಪ್ರಕೃತಿ ವಿಕೋಪದಿಂದಾಗಿ ಬೆಳೆ ನಷ್ಟವಾದರೆ ಬೆಳೆ ವಿಮೆಯಾಗಲಿ ಅಥವಾ ಬೆಳೆ ನಷ್ಟ ಪರಿಹಾರ ಪಡೆಯುವುದಕ್ಕಾಗಲಿ ಆಗುವುದಿಲ್ಲ. ಇನ್ನು ಬ್ಯಾಂಕ್ಗಳಿಂದ ಸಾಲ-ಸೌಲಭ್ಯ ಪಡೆಯಲು ಸಾಧ್ಯವಾಗಲ್ಲ.ಮೃತರ ಹೆಸರಿನಲ್ಲಿ ಜಮೀನು ಇದ್ದರೆ ಕೃಷಿ ಸಾಲ ಸಿಗುವುದಿಲ್ಲ. ಬೀಜ, ಗೊಬ್ಬರ, ಕೃಷಿ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ ಸಿಗುವುದಿಲ್ಲ.
ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಅಭಿವೃದ್ಧಿ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ ಪೌತಿ ಖಾತೆ ಮಾಡಿಕೊಡಲಿದ್ದಾರೆ. ರೈತರ ಭೂಹಿಡುವಳಿ ಬಗ್ಗೆ ಸ್ವಷ್ಟತೆ ಪಡೆಯಲು ಸರ್ಕಾರ ಆಧಾರ್ ಸೀಡಿಂಗ್ ಕಾರ್ಯಕ್ಕೆ ಪೌತಿ ಖಾತೆ ಆಂದೋಲನ ಕೈಗೊಂಡಿದೆ. ಪೌತಿ ಆಂದೋಲನಕ್ಕೆ ಪ್ರತ್ಯೇಕ ಸಾಫ್ಟ್ವೇರ್ ಸಿದ್ಧಪಡಿಸಲಾಗಿದೆ.
ಮನೆ ಮನೆಗೆ ತೆರಳಿ ಅಧಿಕಾರಿಗಳು ವಾರಸುದಾರರ ನಿಖರ ಮಾಹಿತಿ ಪಡೆಯಲಿದ್ದು, ವಂಶವೃಕ್ಷವನ್ನು ಆಧಾರವಾಗಿ ಬಳಸಿಕೊಂಡು ಆಧಾರ್ ಸಂಖ್ಯೆ ಮೂಲಕ ಒಟಿಪಿ ಪಡೆದು ದಾಖಲು ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಬಹಳ ಜಮೀನಿನ ಪಹಣಿಗಳು ಮೃತರ ಹೆಸರಿನಲ್ಲಿ ಇರುವುದು ಕಂಡು ಬಂದಿದೆ. 51.13 ಲಕ್ಷ ಜಮೀನುಗಳ ಮಾಲೀಕರು ನಿಧನರಾಗಿದ್ದಾರೆ. 70 ಲಕ್ಷ ಜಮೀನುಗಳು ಕೃಷಿಯೇತರ ಉದ್ದೇಶಕ್ಕೆ ಬಳಕೆಯಾಗಿದೆ. ಪಹಣಿಗಳಿಗೆ ಆಧಾರ್ ಜೋಡಣೆಯಿಂದ ಎಷ್ಟು ಕೃಷಿ ಭೂಮಿ ಇದೆ. ರೈತರ ಭೂ ಹಿಡುವಳಿ ಎಷ್ಟು? ಸಣ್ಣ ಮತ್ತು ಅತಿ ಸಣ್ಣ ರೈತರ ನಿಖರ ಅಂಕಿ ಸಂಖ್ಯೆ ಸಿಗುತ್ತದೆ. ಪೌತಿ ಖಾತೆ ಮಾಡಿಸಲು ರೈತರು ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ. ಪೌತಿ ಖಾತೆ ಮಾಡುವುದರಲ್ಲಿ ಅಕ್ರಮ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ.