ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಅಸಾನಿ ಚಂಡ ಮಾರುತ ಉಂಟಾಗಿದ್ದು, ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ 14ರ ವರೆಗೆ ಮಳೆ ಯಾಗುವ ಸಾಧ್ಯತೆಗಳಿವೆ. ಒಂದು ವಾರದಿಂದ ರಾಜ್ಯದ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡು ಪ್ರದೇಶದಲ್ಲಿ ಮಳೆಯಾಗುತ್ತಿದೆ. ಇದು ಮುಂದಿನ ನಾಲ್ಕು ದಿನ ಮುಂದುವರಿಯಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಬಿಸಿಲು, ಚಂಡಮಾರುತದ ಪರಿಣಾಮ ದಿಂದ ಮಳೆಯಾದರೆ ದಕ್ಷಿಣ ಒಳನಾಡು, ಕರಾವಳಿ ಮತ್ತು ಪಶ್ಚಿಮಘಟ್ಟ ಪ್ರದೇಶದಲ್ಲಿ ಚಂಡಮಾರುತದಿಂದ ಹೆಚ್ಚಿನ ಮಳೆಯಾಗಲಿದೆ.
ಮೋಡ ಕವಿದ ವಾತಾವರಣ ಇರಲಿದೆ, ಗರಿಷ್ಠ 5 ಸೆಂ.ಮೀ.ವರೆಗೆ ಮಳೆಯಾಗಬಹುದು. ಮುಂಗಾರು ಆಗಮನಕ್ಕೆ ಬೇಸಿಗಯ ಕೊನೆಯ ಅವಧಿಯಲ್ಲಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದರೆ ಅದರಿಂದ ಮುಂಗಾರು ಮಾರುತಗಳ ಆಗಮನಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಈಗ ಅಸಾನಿ ಚಂಡಮಾರುತ ಉದ್ಭವಿಸಿರುವುದರಿಂದ ಮುಂಗಾರು ಮಳೆ ತರುವ ಮೋಡಗಳು ಆಗಮಿಸಲು ಉತ್ತಮ ಪರಿಸ್ಥಿತಿ ನಿರ್ಮಾಣವಾಗಲಿದೆ.



