ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ನಿನ್ನೆ ( ಮಾ .18 ) ಸಂಜೆ ಅಕಾಲಿಕ ಭಾರೀ ಮಳೆ ಸುರಿದಿದ್ದು, ಉತ್ತರ ಕನ್ನಡ ಜಿಲ್ಲೆ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಅಸ್ತವ್ಯಸ್ತವಾಗಿದೆ. ಭಾರಿ ಮಳೆ, ಗಾಳಿ ಉತ್ಸವಕ್ಕೆ ಹಾಕಿದ್ದ ಪೆಂಡಲ್ ಕಿತ್ತು ಹೋಗಿತ್ತು. ಇನ್ನು ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ರವಿ ನೀಲಪ್ಪ ಬೊಳಮ್ಮನವರ (48) ಎಂಬ ರೈತ ಸಿಡಿಲಿಗೆ ಮೃತಪಟ್ಟಿದ್ದಾನೆ.
ಉತ್ತರ ಜಿಲ್ಲೆಯ ಸಿದ್ದಾಪುರ, ಮುಂಡಗೋಡ, ಯಲ್ಲಾಪುರ, ಜೊಯಿಡಾ ತಾಲೂಕುಗಳಲ್ಲಿಯೂ ಭರ್ಜರಿ ಮಳೆ ಸುರಿದಿದೆ. ಹಾವೇರಿ ಜಿಲ್ಲೆಯ ಅಕ್ಕಿ ಆಲೂರು, ಗದಗ ಜಿಲ್ಲೆಯ ಶಿಗ್ಲಿ ಗ್ರಾಮದಲ್ಲಿ ಮಧ್ಯಾಹ್ನ ಜೋರಾಗಿ ಮಳೆ ಸುರಿಯಿತು. ಹುಬ್ಬಳ್ಳಿ-ಧಾರವಾಡ ನಗರದಲ್ಲೀಯೂ ಮಳೆಯಾಗಿದೆ.
ಹಾನಗಲ್ಲ ತಾಲೂಕು ಕೊಂಡೋಜಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಿಡಿಲು ಬಡಿದು ರೈತರೊಬ್ಬರು ಮೃತ ಪಟ್ಟಿದ್ದಾರೆ. ರವಿ ನೀಲಪ್ಪ ಬೊಳಮ್ಮನವರ (48) ಮೃತ. ಹೊಲದ ಕೆಲಸ ಮುಗಿಸಿಕೊಂಡು ಮನೆಗೆ ಬಂದು, ಮೇವು ತರಲು ಬಣವೆ ಕಡೆ ಹೋದ ಸಮಯದಲ್ಲಿ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಮಲೆನಾಡಿನ ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ, ಕೊಪ್ಪ, ಎನ್.ಆರ್.ಪುರ, ಶೃಂಗೇರಿಯಲ್ಲಿ ಅರುಣ ಅಬ್ಬರಿಸಿದ್ದಾನೆ. ಜೋರು ಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದಿವೆ. ಕೊಡಗು ಜಿಲ್ಲೆಯ ವಿವಿಧೆಡೆ ವರುಣನ ಸಿಂಚನವಾಗಿದ್ದು, ಮಡಿಕೇರಿ ತಾಲೂಕಿನ ಚೇರಂಬಾಣೆ, ಕಾರುಗುಂದ, ನಾಪೋಕ್ಲು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.



