ಬೆಳಗಾವಿ: ಟಿವಿ, ಕಾರು ಇದ್ದವರಿಗೆ ರೇಷನ್ ಕಾರ್ಡ್ ಇಲ್ಲ ಎಂದು ಭಾರೀ ಸುದ್ದಿಯಾಗಿದ್ದ ಆಹಾರ ಖಾತೆ ಸಚಿವ ಉಮೇಶ್ ಕತ್ತ, ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಪಡಿತರ ಅಕ್ಕಿ ಕಡಿತಗೊಳಿಸಿರುವುದನ್ನು ಪ್ರಶ್ನಿಸಿದ ರೈತನಿಗೆ ಸಾಯೋದು ಒಳ್ಳೆಯದು ಎಂದು ಸಚಿವ ಉಢಾಪೆ ಉತ್ತರ ನೀಡಿದ್ದಾರೆ.
ಕೊರೊನಾದ ಸಂಕಷ್ಟದಲ್ಲಿದ್ದು, ಈ ನಡುವೆ ಸರ್ಕಾರ ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು 14 ದಿನಗಳ ಕೊರೊನಾ ಕರ್ಫ್ಯೂ ವಿಧಿಸಿದೆ. ಇಂತಹ ಸಮಯದಲ್ಲಿ ಜನರ ಜೊತೆ ನಿಂತು ಅವರಿಗೆ ಅವರ ಕಷ್ಟಕ್ಕೆ ಸಾಥ್ ನೀಡಬೇಕಾದ ಆಹಾರ ಸಚಿವ ಉಮೇಶ್ ಕತ್ತಿ ಅಹಂಕಾರದ ಮಾತನಾಡಿದ್ಧಾರೆ.
ಈಶ್ವರ ಆರ್ಯರ ಎಂಬ ರೈತ ಕೇಳಿದ ಪ್ರಶ್ನೆಗೆ ಸಚಿವರು ಉಡಾಫೆ ಉತ್ತರ ನೀಡಿದ್ದಾರೆ. ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಂಘದ ಕಾರ್ಯಕರ್ತ ಈಶ್ವರ್ ಪಡಿತರ ಅಕ್ಕಿ ಕಡಿತಗೊಳಿಸಿರೋದನ್ನು ಪ್ರಶ್ನಿಸಿದರು. ಈ ವೇಳೆ ಉತ್ತರ ಕರ್ನಾಟಕದಲ್ಲಿ ಅಕ್ಕಿ ಜತೆಗೆ ಜೋಳ ಕೊಡುತ್ತೇವೆ. ಲಾಕ್ ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಉಮೇಶ್ ಕತ್ತಿ ಹೇಳಿದರು.
ಈ ವೇಳೆ ಅಲ್ಲಿವರೆಗೆ ಏನು ಮಾಡದು ಎಂದು ರೈತ, ಉಪವಾಸ ಸಾಯೋದಾ ಎಂದು ಈಶ್ವರ್ ಪ್ರಶ್ನಿಸಿದ್ದಾರೆ. ಇದಕ್ಕೆ ಸಚಿವರು, ಸಾಯೋದು ಒಳ್ಳೆಯದು, ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಹೇಳಿ, ಫೋನ್ ಮಾಡಬೇಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದು, ಈ ಆಡಿಯೋ ವೈರಲ್ ಆಗಿದೆ.
ಈ ಕುರಿತು ಸ್ಪಷ್ಟನೆ ನೀಡಿದ ಉಮೇಶ್ ಕತ್ತಿ, ಯೋಜನೆಯಲ್ಲಿ ಏನು ಇದೆ, ಅದನ್ನೇ ಹೇಳಿದ್ದೇನೆ. ಕರೆ ಮಾಡಿದ ವ್ಯಕ್ತಿ ಸತ್ತೋಗೋದಾ ಎಂದು ಕೇಳಿದ ಅದಕ್ಕೆ ನಾನು ಸತ್ತೋಗಿ ಎಂದು ಹೇಳಿದ್ದೇನೆ. ಬೇಡ ಎಂದು ಹೇಳುವಷ್ಟು ದೊಡ್ಡ ಮನಸ್ಸು ನನಗಿಲ್ಲ ಬೆಳಗಾವಿಯಲ್ಲಿ ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.



