ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ರಿಲೀಸ್ ಆಗುತ್ತಿದ್ದಂತೆ ಎಚ್ಚರಗೊಂಡ ಮಿತ್ರಮಂಡಳಿ 6 ಸಚಿವರು ತಮ್ಮ ವಿರುದ್ಧ ಯಾವುದೇ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಈ ಕುರಿತಂತೆ ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಇದೇನು ಮೊದಲೇನು ಅಲ್ಲ. ರಾಜಕೀಯ ಷಡ್ಯಂತ್ರಕ್ಕೆ ನಮ್ಮ ಜೀವನ ಬಲಿಯಾಗಬಾರದು ಎನ್ನುವ ಕಾರಣಕ್ಕಾಗಿ ಈ ಹಿಂದೆಯೋ ಕೋರ್ಟ್ ಮೊರೆ ಹೋಗಲಾಗಿದೆ. ಈಗಾಗಲೇ 22 ಮಾಜಿ, ಹಾಲಿ ಸಚಿವರು, ಶಾಸಕರು ಕೋರ್ಟ್ ಮೊರೆ ಹೋಗಿ ಮಾಧ್ಯಮಗಳಲ್ಲಿ ತಮ್ಮ ವಿರುದ್ಧದ ಯಾವುದೇ ಸುದ್ದಿ ಪ್ರಸಾರವಾಗದಂತೆ ಆದೇಶ ಪಡೆದಿದ್ದಾರೆ. ಈಗ ನಾವು ಪಡೆಯಲು ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು.
ಕೃಷಿ ಸಚಿವ ಬಿಸಿ ಪಾಟೀಲ್ ಅವರು ಈ ಸಂಬಂಧ ಟ್ವಿಟ್ ಮಾಡಿದ್ದು, ಒಬ್ಬ ರೈತನ ಮಗನಾಗಿ ಯಾವುದೇ ಗಾಡ್ ಫಾದರ್ ಇಲ್ಲದೇ ಇಷ್ಟರ ಮಟ್ಟಕ್ಕೆ ಬೆಳೆದುಬಂದಿದ್ದು ಬಹಳಷ್ಟು ಜನರಿಗೆ ಸಹಿಸಲು ಆಗುವುದಿಲ್ಲ. ಆದರೆ ಯಾವುದೋ ಕುತಂತ್ರಿಗಳ ರಾಜಕೀಯ ಷಡ್ಯಂತ್ರಕ್ಕೆ ನಮ್ಮ ಹೆಸರನ್ನು ವಿನಾಕಾರಣ ಸತ್ಯಾಸತ್ಯತೆ ಅರಿಯದೆ ನಮ್ಮ ತೇಜವಧೆ ಆಗಬಾರದು ಎಂಬ ದೃಷ್ಟಿಯಲ್ಲಿ , ಮುನ್ನೆಚ್ಚರಿಕೆಯ ಕ್ರಮವಾಗಿ ಕಾನೂನಿನ ಮೊರೆ ಹೋಗಿದ್ದೇವೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿ, ನಮ್ಮ ರಾಜಕೀಯ ಜೀವನದ ನಾಶಕ್ಕೆ ಷಡ್ಯಂತ್ರ ನಡೆಯುತ್ತಿರುವ ಬಗ್ಗೆ ಎಚ್ಚರಿಕೆ ವಹಿಸಿದ್ದೇವೆ. ಇಷ್ಟು ವರ್ಷದ ರಾಜಕೀಯ ಜೀವನ ಹಾಳಾಗಬಾರದು ಎನ್ನುವ ಕಾರಣಕ್ಕೆ ನಮ್ಮ ವಿರುದ್ಧದ ಯಾವುದೇ ಸುದ್ದಿ ಪ್ರಸಾರವಾಗದಂತೆ ತಡೆಯಲು ಕಾನೂನು ಮೊರೆ ಹೋಗಿದ್ದೇವೆ. ಈ ರಾಜಕೀಯ ಷಡ್ಯಂತ್ರ ಯಾರು ಮಾಡ್ತಾ ಇದ್ದಾರೆ ಎನ್ನುವುದು ಎರಡು ಮೂರು ದಿನಗಳಲ್ಲಿ ಗೊತ್ತಾಗಲಿದೆ ಎಂದರು.



