ಬೆಳಗಾವಿ: ಸಿದ್ದರಾಮಯ್ಯ ಏನಾದ್ರೂ ಆರ್ಎಸ್ಎಸ್ನಲ್ಲಿ ಇದ್ರಾ..? ಸಂಘದ ಜವಾಬ್ದಾರಿ ನಿಮಗ್ಯಾಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಏಪ್ರಿಲ್ ಬಳಿಕ ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ. ಇದು ಆರ್ಎಸ್ಎಸ್ ಮೂಲಳಿಂದ ನನಗೆ ಮಾಹಿತಿ ಬಂದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್ ಮುಖ್ಯಮಂತ್ರಿ ಬದಲಾವಣೆ ವಿಚಾರ ಎಲ್ಲೂ ಪ್ರಸ್ತಾಪವಾಗಿಲ್ಲ ಎಂದು ಕಿಡಿಕಾರಿದರು.
ಗೋಮಾಂಸ ತಿನ್ನುವವರ ಜೊತೆಗೆ ಆರ್ಎಸ್ಎಸ್ ನಾಯಕರೂ ಮಾತನಾಡಲು ಸಾಧ್ಯವೇ..? ಸಿದ್ದರಾಮಯ್ಯ ಈ ಹಿಂದೆ ಏನಾದ್ರು ಆರ್ಎಸ್ಎಸ್ನಲ್ಲಿ ಇದ್ದರಾ ಅಥವಾ ಸಂಘದ ಜವಾಬ್ದಾರಿ ವಹಿಸಿದ್ರಾ ಎಂದರು. ಸಿದ್ದರಾಮಯ್ಯ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೊತೆ ಫೋನ್ನಲ್ಲಿ ಮಾತನಾಡಿದ್ದಾರಾ..? ಸಿದ್ದರಾಮಯ್ಯ ಅವರನ್ನು ರಾಹುಲ್ ಗಾಂಧಿ ಕಾಂಗ್ರೆಸ್ನಿಂದ ಹೊರಗೆ ಇಟ್ಟಿದ್ದಾರೆ ಎಂದು ಟೀಕಿಸಿದರು.
ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ್ ಕೋರೆ ಮಾತನಾಡಿ, ಸಿದ್ದರಾಮಯ್ಯ ಅವರ ಆರ್ಎಸ್ಎಸ್ ಬೇರೆ ಇರಬಹುದು. ಆದರೆ, ಅಮಿತ್ ಶಾ ಅವರೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಟಾಂಗ್ ನೀಡಿದರು.



