ನವದೆಹಲಿ: ನನಗೆ ಕಾಂಗ್ರೆಸ್ ಬಿ ಟೀಂ ಎಂದ ಸಚಿವ ಮುರುಗೇಶ್.ಆರ್ ನಿರಾಣಿಗೆ ರಾಜ್ಯಕ್ಕೆ ಹಿಂದಿರುಗಿದ ಮೇಲೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ ಎಂದು ವಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ನ ಬಿ ಟೀಂನಂತೆ ಕೆಲಸ ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ರಾಜೀನಾಮೆ ಕೇಳುತ್ತಿಯಾ..? ಬಿಜೆಪಿ, ಯಡಿಯೂರಪ್ಪ, ಸಂಘ ಪರಿವಾರದ ಆರ್ಶೀವಾದದಿಂದ ಗೆದ್ದು ಬಂದಿರುವ ನೀನು ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಶಾಸಕನಾಗಿ ಗೆದ್ದು ಬಾ ಎಂದು ಏಕ ವಚನದಲ್ಲಿಯೇ ಸಚಿವ ಮುರುಗೇಶ್ ನಿರಾಣಿ ಬಹಿರಂಗ ಸವಾಲು ಹಾಕಿದ್ದರು.
ಇಂದು ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಯತ್ನಾಳ್, ಕರ್ನಾಟಕದ ಇಬ್ಬರು ಸಚಿವರು ನನ್ನ ಮತ್ತು ನನ್ನ ಸಮುದಾಯದ ಮಠಾಧೀಶರ ವಿರುದ್ಧ ಮಾತನಾಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ನಾನು ರಾಜ್ಯಕ್ಕೆ ಮರಳಿದ ನಂತರ ಅವರ ಆರೋಪಗಳಿಗೆ ಉತ್ತರಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ತಮ್ಮ ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಪಕ್ಷದ ಹೈಕಮಾಂಡ್ ನನಗೆ ಬುಲಾವ್ ನೀಡಿಲ್ಲ ಮತ್ತು ನಾನು ಅವರ ಭೇಟಿ ಯಾವುದೇ ಸಮಯ ಕೋರಿಲ್ಲ. ಶ್ರೀ ಸಿದ್ದೇಶ್ವರ ಸಂಸ್ಥೆಯ ಸಿಬಿಎಸ್ಇ ಶಾಲೆಗಳಲ್ಲಿ ಒಂದನ್ನು ನೋಂದಾಯಿಸಲು ನಾನು ದೆಹಲಿಗೆ ಬಂದಿದ್ದೇನೆ ಎಂದರು.



