ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಯತಿರಾಜದಾಸರ ಗುರುಪೀಠದಲ್ಲಿ ವಿಶೇಷ ವಿವಾಹ ಸಾಕ್ಷಿಯಾಗಿದೆ. 30 ವರ್ಷದ ಬಳಿಕ ಪ್ರೇಮಿಗಳು ಒಂದಾಗಿದ್ದಾರೆ. ಇಂದು ನಡೆದ ಮದುವೆಯಲ್ಲಿ ಮೈಸೂರು ಮೂಲದ 65 ವರ್ಷದ ಚಿಕ್ಕಣ್ಣ ಹಾಗೂ 58ರವಯಸ್ಸಿನ
ಜಯಮ್ಮ ಸತಿಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವರ ಚಿಕ್ಕಣ್ಣನಿಗೆ ಜಯಮ್ಮ ಅತ್ತೆ ಮಗಳಾಗಬೇಕು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಆತನಿಗೆ ಆಕೆಯನ್ನು ಕೊಟ್ಟು ಮದುವೆ ಮಾಡಿಕೊಡಲು ಹೆಣ್ಣಿನ ಮನೆಯವರು ಒಪ್ಪಲಿಲ್ಲ. ಬೇರೆಯವರ ಜೊತೆ ಮದುವೆಯನ್ನೂ ಮಾಡಿದ್ದರು. ಇದೀಗ 30 ವರ್ಷಗಳ ಬಳಿಕ ಪ್ರೇಮಿಗಳಿಗೆ ಕಂಕಣ ಬಲ ಕೂಡಿ ಬಂದಿದೆ.
ಮೂಲತಃ ಹಾಸನ ಜಿಲ್ಲೆ ಹೊಳೆನರಸೀಪುರ ಗ್ರಾಮದ ಚಿಕ್ಕಣ್ಣ ಸದ್ಯ ಮೈಸೂರಿನಲ್ಲಿ ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ತನ್ನ ಅತ್ತೆ ಮಗಳಾದ ಜಯಮ್ಮಳನ್ನು ಪ್ರೀತಿಸುತ್ತಿದ್ದ ಅವರು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಚಿಕ್ಕಣ್ಣ ಕೂಲಿ ಮಾಡುತ್ತಾರೆ ಎಂಬ ಕಾರಣಕ್ಕೆ ಜಯಮ್ಮರ ಮನೆಯವರು ಮದುವೆಗೆ ನಿರಾಕರಿಸಿ, ಬೇರೊಬ್ಬರ ಜೊತೆಗೆ ಮದುವೆ ಮಾಡಿದ್ದರು.
ಜಯಮ್ಮರಿಗೆ ಮದುವೆಯಾಗಿ 3 ದಶಕಗಳೇ ಕಳೆದಿದ್ದು ಒಬ್ಬ ಮಗನಿದ್ದಾನೆ. ತನ್ನ ಪತಿ ಹಾಗೂ ಮಗನ ಜೊತೆಯಲ್ಲಿ ಮೈಸೂರಿನಲ್ಲಿದ್ದರು ಜಯಮ್ಮ. ಈ ನಡುವೆ ಜಯಮ್ಮರ ಕುಟುಂಬದಲ್ಲಿ ಬಿರುಕು ಮೂಡಿತ್ತು. ಇತ್ತ ಚಿಕ್ಕಣ್ಣ ಆಕೆಯ ನೆನಪಿನಲ್ಲೇ ದಿನ ದೂಡುತ್ತಿದ್ದ. ಅತ್ತ ತನ್ನ ಪತಿಯ ಜೊತೆಗೆ ಸೌಹಾರ್ದಯುತ ಬದುಕು ಸಾಗಿಸಲಾಗದ ಜಯಮ್ಮ ತನ್ನ ಕೊನೆಯ ದಿನಗಳನ್ನು ಚಿಕ್ಕಣ್ಣರ ಜೊತೆಗೆ ಕಳೆಯಲು ನಿರ್ಧರಿಸಿದ್ದರು.
ಚಿಕ್ಕಣ್ಣರ ಮನೆ ದೇವರು ಮೇಲುಕೋಟೆಯ ಶ್ರೀಚೆಲುವನಾರಾಯಣಸ್ವಾಮಿ ಅಲ್ಲೇ ಮದುವೆಯಾಗಲು ನಿರ್ಧರಿಸಿದ್ದರು. ಅದರಂತೆ ಇಂದು ಮೇಲುಕೋಟೆಗೆ ಬಂದ ಚಿಕ್ಕಣ್ಣ ಹಾಗೂ ಜಯಮ್ಮ ಇಬ್ಬರೂ ಇಲ್ಲಿನ ಯತಿರಾಜ ದಾಸರ ಗುರುಪೀಠದಲ್ಲಿ ಮದುವೆಯಾಗಿದ್ದಾರೆ. ಗುರುಪೀಠದ ಶ್ರೀ ಶ್ರೀನಿವಾಸನ್ ನರಸಿಂಹನ್ ಗುರೂಜಿ ಅವರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಆ ಮೂಲಕ ಚಿಕ್ಕಣ್ಣ ತನ್ನ ಮೂರು ದಶಕಗಳ ಪ್ರೀತಿಯನ್ನು ಕಡೆಗೂ ಪಡೆದುಕೊಂಡಿದ್ದಾರೆ.
ಚಿಕ್ಕಣ್ಣ ಹಾಗೂ ಜಯಮ್ಮ ದಂಪತಿ ಮಾತನಾಡಿ, ಈ ವಯಸ್ಸಿನಲ್ಲಿ ನಮಗೆ ಮದುವೆ ಅಗತ್ಯವಿರಲಿಲ್ಲ. ಆದರೂ ನಾವು ನಮ್ಮ ಆತ್ಮತೃಪ್ತಿಗಾಗಿ ಮದುವೆಯಾಗಲು ನಿರ್ಧರಿಸಿ ದಾಂಪತ್ಯಕ್ಕೆ ಕಾಲಿಟ್ಟಿದ್ದೇವೆ. ಮನೆ ದೇವರಿರುವುದು ಮೇಲುಕೋಟೆಯಲ್ಲಿ ಮದುವೆಯಾಗಿರುವುದು ನಮಗೆ ತೃಪ್ತಿ ತಂದಿದೆ ಎಂದಿದ್ದಾರೆ.



