ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಇನ್ನೊಂದು ವಾರದ ಬೆಳವಣಿಗೆ ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು (ಡಿ9) ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಂತರ ಮಾತನಾಡಿದ ಅವರು, ಕೇರಳ ವಿದ್ಯಾರ್ಥಿಗಳು ಹಾಗೂ ಗಡಿಭಾಗದಲ್ಲಿ ಬರುವವರಿಗೆ ಟೆಸ್ಟಿಂಗ್ ಮುಂದುವರಿಯುತ್ತದೆ. ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಬಗ್ಗೆ ಮುಂದಿನ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುವುದು. ಕ್ರಿಸ್ಮಸ್, ಹೊಸ ವರ್ಷಾಚರಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮುಂದುವರಿಸಲಾಗುವುದು. ಮೂವರಿಗೆ ಕೊರೊನಾ ಪಾಸಿಟಿವ್ ಬಂದರೆ ಕ್ಲಸ್ಟರ್ ಮಾಡುತ್ತೇವೆ. ಸದ್ಯಕ್ಕೆ ಹೊಸದಾಗಿ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಎಂಕೆ ಸುದರ್ಶನ್ ಎಚ್ಚರಿಕೆ ನೀಡಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಕಷ್ಟ. ಮುಂದೆ ನೈಟ್ ಕರ್ಫ್ಯೂ ಹಾಗು ಲಾಕ್ಡೌನ್ ಮಾಡಬಾರದು ಎಂದರೆ ಈಗಲೇ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಸಮಾರಂಭಗಳು, ಜನ ಸೇರುವ ಕಾರ್ಯಕ್ರಮಗಳು, ಜಾತ್ರೆಗಳು, ಮದುವೆಗಳಿಗೆ ಜಸ ಸೇರುವುದಕ್ಕೆ ಬ್ರೇಕ್ ಹಾಕಬೇಕು. ಹೊಸ ವರ್ಷಾಚರಣೆಗೆ ಅವಕಾಶ ನೀಡಬಾರದು. ಪ್ರತಿಭಟನೆಗಳಿಗೆ ಅವಕಾಶ ಬೇಡ. ಚುನಾವಣಾ ಫಲಿತಾಂಶದ ಸಂಭ್ರಾಮಚರಣೆ ಬೇಡ. ಇದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ಆರೆ ಎಂದು ಡಾ.ಎಂಕೆ ಸುದರ್ಶನ್ ತಿಳಿಸಿದ್ದಾರೆ.
ನಾಳೆ ಅಥವಾ ನಾಡಿದ್ದು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡುತ್ತದೆ. ಬಹುತೇಕ ಸಭೆ, ಸಮಾರಂಭ, ಮೆರವಣಿಗೆ, ಕಾರ್ಯಕ್ರಮಗಳು, ಹೊಸ ವರ್ಷಾಚರಣೆಗೂ ಈ ಬಾರಿಯೂ ಬ್ರೇಕ್ ಬೀಳುವ ಸಾಧ್ಯತೆಯಿದೆ. ನೈಟ್ ಕರ್ಫ್ಯೂ, ಲಾಕ್ಡೌನ್ ಮಾಡದೆ ಗೈಡ್ಲೈನ್ಸ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.



