ಬೆಂಗಳೂರು: ಕಳೆದ ವರ್ಷದ ತೀವ್ರ ಬರದಿಂದ ಕಂಗೆಟ್ಟಿದ್ದ ರೈತರಿಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಈ ವರ್ಷ ವಾಡಿಕೆಗಿಂತ ಶೇ.6ರಷ್ಟು ಹೆಚ್ಚುವರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಈ ಮೂಲಕ ಕಳೆದ ವರ್ಷದ ಬರಗಾಲದಿಂದ ತೀವ್ರ ಹಾನಿಗೊಳಗಾಗಿದ್ದ ರೈತರಿಗೆ ತುಸು ನೆಮ್ಮದಿ ಸುದ್ದಿ ಸಿಕ್ಕಂತಾಗಿದೆ. ಕೃಷಿ ಕಾರ್ಯಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ವರ್ಷದ ಮುಂಗಾರು ದೀರ್ಘಾವಧಿಯಲ್ಲಿ 1971 ರಿಂದ 2020 ವರ್ಷಕ್ಕೆ ಹೊಲಿಕೆ ಮಾಡಿದ್ರೆ, ಸರಾಸರಿ ಮಳೆ (87 ಸೆಂ.ಮೀ.) ಪ್ರಮಾಣಕ್ಕಿಂತ ಶೇ.6ರಷ್ಟು ಹೆಚ್ಚುವರಿ ಮಳೆಯಾಗಲಿದೆ. ಈ ಮೂಲಕ ರಾಜ್ಯದ 2024ರ ಮುಂಗಾರು ಎಲ್ಲ ಜಿಲ್ಲೆಗಳಲ್ಲಿ ಶೇ.106 ರಷ್ಟು ಮಳೆಯಾಗುವ ಸಾದ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ನಿಟ್ಟಿನಲ್ಲಿ, ಕೃಷಿ ಉತ್ಪಾದನೆ ಹಾಗೂ ರೈತರ ಆದಾಯ ಹೆಚ್ಚಳಕ್ಕೆ ಸಿದ್ಧತೆಗಳನ್ನು ಕೈಗೊಳ್ಳಬೇಕಿದೆ. ಅವುಗಳಲ್ಲಿ ಪ್ರಮುಖವಾದ ಎಪ್ರಿಲ್ ಕೊನೆ ಹಾಗೂ ಮೇ ತಿಂಗಳಲ್ಲಿ ಮಳೆ ಮುನ್ಸೂಚನೆಯಿರುವುದರಿಂದ ಮಾಗಿ ಉಳುಮೆ ಕೈಗೊಂಡು ಮಣ್ಣು ಮತ್ತು ನೀರು ಸಂರಕ್ಷಣೆಗೆ ಒತ್ತು ನೀಡಬೇಕು.
ಮಳೆನೀರಿನ ಸಂರಕ್ಷಣೆಗೆ ಬದು ಹಾಗೂ ಕೃಷಿ ಹೊಂಡಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕು. ಎರಡನೇ ಅಥವಾ ಮೂರನೇ ಮಳೆ ನಂತರ, ಭೂಮಿ ಹದಗೊಳಿಸಿ ಹಸಿರೆಲೆ ಗೊಬ್ಬರಗಳಾದ ಅಪ್ಸೆಣಬು, ಚಂಬೆ, ಹುರುಳಿಯನ್ನು 45-60 ದಿನಗಳಲ್ಲಿ ಹಸಿರೆಲೆ ಗೊಬ್ಬರವಾಗಿ ಅಥವಾ ಹಸಿಕಾಯಿಗೆ ಸೂಕ್ತ ದ್ವಿದಳ ಬೆಳೆಗಳಾದ ಅವರೆ, ಅಲಸಂಧೆಯನ್ನು ಬಿತ್ತಿ ಹಸಿಕಾಯಿ ಕಿತ್ತ ನಂತರ ಸೊಪ್ಪನ್ನು ಭೂಮಿಗೆ ಸೇರಿಸುವುದು. ಇದರಿಂದ ಮಣ್ಣಿನ ಫಲವತ್ತೆತೆ ಹೆಚ್ಚುವುದಲ್ಲದೆ, ಮಣ್ಣಿನಲ್ಲಿ ತೇವಾಂಶವನ್ನು ಹೆಚ್ಚಿನ ಕಾಲ ಸಂಗ್ರಹಿಸಲು ಸಾಧ್ಯವಾಗುತ್ತದೆ.
ಕಳೆದ ಬಾರಿಯ ಮಳೆ ಕೊರತೆ ಹಾಗೂ ಕುಸಿದಿರುವ ಅಂತರ್ಜಲ ಮಟ್ಟದಿಂದ, ಈ ಬಾರಿ ಮಣ್ಣಿನಲ್ಲಿ ತೇವಾಂಶದ ಕೊರತೆಯಿದ್ದು, ಕೆರೆಕಟ್ಟೆ ಹಾಗೂ ಅಣೆಕಟ್ಟುಗಳಿಗೆ ನೀರಿನ ಆಗಮನವಾಗುವ ಸಾಧ್ಯತೆಯಿದ್ದು, ಈ ಪ್ರದೇಶದಲ್ಲಿ ಬೆಳೆಗಳ ಮಧ್ಯಮವಧಿ ಹಾಗೂ ಅಲ್ಫಾವಧಿ ತಳಿಗಳ ಬಿತ್ತನೆಗೆ ಅವಶ್ಯ ಬಿತ್ತನೆಬೀಜ ಸಿದ್ಧಪಡಿಸಿಕೊಳ್ಳಬೇಕು ಎಂದು ಪ್ರಕಟನೆ ತಿಳಿಸಿದೆ.