ಬೆಂಗಳೂರು: ಈ ಬಾರಿಯ ಮುಂಗಾರು ಮಳೆ ಆಗಮನಕ್ಕೆ ಸಮುದ್ರದಲ್ಲಿ ಪೂರಕ ವಾತಾವರಣ ನಿರ್ಮಾಣವಾಗಿಲ್ಲ. ಹೀಗಾಗಿ ಈ ಬಾರಿ ಮುಂಗಾರು ಇನ್ನಷ್ಟು ವಿಳಂಬವಾಗಲಿದೆ. ಈ ಬಾರಿಯ ಹಿಂಗಾರು ಮಳೆಯೂ ನಿರೀಕ್ಷಿತ ಪ್ರಮಾಣದಲ್ಲಿ ಬಿದ್ದಿಲ್ಲ. ಇದರಿಂದ ಬಿಸಿಲ ಝಳ ಹೆಚ್ಚಾಗಿದೆ.
ಭಾರತೀಯ ಹವಾಮಾನ ಇಲಾಖೆ ಈ ಬಾರಿ ಜೂ. 4ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸಲಿವೆ ಎಂದು ತಿಳಿಸಿತ್ತು. ಆದರೆ ಸದ್ಯದ ಪರಿಸ್ಥಿತಿ ಪ್ರಕಾರ ಮತ್ತೂ 4-5 ದಿನ ತಡವಾಗುವ ಸಾಧ್ಯತೆ ಇದೆ. ಬಹುತೇಕ ನಾಲ್ಕು ವರ್ಷದ ಬಳಿಕ ಮುಂಗಾರು ಆಗಮನ ಮತ್ತೆ ವಿಳಂಬವಾಗುತ್ತಿದೆ.
2019ರಲ್ಲಿ ಒಂದು ವಾರ ತಡವಾಗಿತ್ತು. ಜೂ. 8ರಂದು ಮುಂಗಾರು ಮಾರುತ ಕೇರಳ ಕರಾವಳಿ ಪ್ರವೇಶಿಸಿತ್ತು. ಇದರಿಂದಾಗಿ ದೇಶದ ವಿವಿಧೆಡೆಯೂ ಮಳೆ ವಿಳಂಬವಾಗಿತ್ತು. ಕೇರಳ ಪ್ರವೇಶಿಸುವ ಮುಂಗಾರು ಸಾಮಾನ್ಯವಾಗಿ ಒಂದು ಆಥವಾ ಎರಡು ದಿನದಲ್ಲಿ ರಾಜ್ಯ ಕರಾವಳಿಗೆ ತಲುಪುವುದು ವಾಡಿಕೆ. ಆದರೆ ಕೇರಳಕ್ಕೆ ಪ್ರವೇಶಿಸುತ್ತಿದ್ದಂತೆ ಅರಬಿ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗಿ ಕರಾವಳಿ ಕರ್ನಾಟಕಕ್ಕೆ ಪ್ರವೇಶಿಸಬೇಕಿದ್ದ ಮುಂಗಾರಿಗೆ ತಡೆಯಾಗಿ 2019 ರಲ್ಲಿ ಆರು ದಿನ ವಿಳಂಬವಾಗಿ ಜೂ. 14ರಂದು ಕರಾವಳಿಗೆ ಪ್ರವೇಶ ಮಾಡಿತ್ತು.
ಗಾಳಿ ಬೀಸುವಿಕೆ, ಗಾಳಿಯ ಚಲನೆ, ಕಡಲಿನಲ್ಲಿ ಅಬ್ಬರ ಹೆಚ್ಚಾಗುವುದು ಮತ್ತು 48 ಗಂಟೆಗಳ ನಿರಂತರ ಮಳೆ ಸುರಿಯುವಿಕೆ ಮೊದಲಾದ ಲಕ್ಷಣಗಳನ್ನು ಅವಲೋಕಿಸಿ ಹವಾಮಾನ ಇಲಾಖೆ ಮುಂಗಾರಿನ ಆಗಮನ ಲೆಕ್ಕಚಾರ ಹಾಕಲಾಗುತ್ತಿದೆ.



