ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಅಂತರ್ ನಗರ ನೂತನ ಹವಾ ನಿಯಂತ್ರಿತ ಎಲೆಕ್ಟ್ರಿಕ್ ಚಾಲಿತ ಇ.ವಿ. ಪವರ್ ಪ್ಲಸ್ ಬಸ್ ಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು.
ವಿಧಾನಸೌಧದ ಮುಂದೆ ನಡೆದ ಸರಳ ಕಾರ್ಯಕ್ರಮದಲ್ಲಿ ಹವಾನಿಯಂತ್ರಿತ 50 ಇವಿ ಪವರ್ ಪ್ಲಸ್ ಎಲೆಕ್ಟ್ರಿಕ್ ಬಸ್ ಗಳಲ್ಲಿ ಮೊದಲ ಹಂತವಾಗಿ 25 ಬಸ್ ಗಳನ್ನು ಸಿಎಂ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಶಾಸಕ ಚಂದ್ರಪ್ಪ, ನಿಮಗದ ಉಪಾಧ್ಯಕ್ಷ ಮೋಹನ್ ಬಿ ಮೆಣಸಿನಕಾಯಿ ಹಾಗೂ ಇತರ ಸಾರಿಗೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
- ಆರು ಜಿಲ್ಲೆಗಳಲ್ಲಿ ಸಂಚರಿಸಲಿರುವ ಎಲೆಕ್ಟ್ರಿಕ್ ಬಸ್
- ಬೆಂಗಳೂರು-ಮೈಸೂರು
- ಬೆಂಗಳೂರು-ಮಡಿಕೇರಿ
- ಬೆಂಗಳೂರು-ವಿರಾಜಪೇಟೆ
- ಬೆಂಗಳೂರು-ದಾವಣಗೆರೆ
- ಬೆಂಗಳೂರು-ಶಿವಮೊಗ್ಗ
- ಬೆಂಗಳೂರು-ಚಿಕ್ಕಮಗಳೂರು
ವಿದ್ಯುತ್ ವಾಹನಗಳ ಚಾರ್ಚಿಂಗ್ ಕೇಂದ್ರವನ್ನು ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಸ್ಥಾಪಿಸಲಾಗಿದ್ದು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗು ಚಿಕ್ಕಮಗಳೂರು ನಗರಗಳಲ್ಲಿ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ ದಿನ 7400 ಅನುಸೂಚಿಗಳಿಂದ 27 ಲಕ್ಷ ಕಿ.ಮೀ ಕ್ರಮಿಸುವುದರ ಮೂಲಕ 26 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದ್ದು, ಇದರಲ್ಲಿ ಶೇ.17 ರಷ್ಟು ವಿದ್ಯಾರ್ಥಿಗಳಿಗೆ ಸಾರಿಗೆ ಸೇವೆಯನ್ನು ಕಲ್ಪಿಸಲಾಗುತ್ತಿದೆ. ನಿಗಮವು ಪ್ರತಿ ದಿನ ರೂ.9.5 ಕೋಟಿ ಆದಾಯ ಗಳಿಸುತ್ತಿದೆ. ರಾಜ್ಯ ರಸ್ತೆ ಸಾರಿಗೆ ನಿಗಮವು ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆಯಡಿಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ ಗಳನ್ನು ಕಾರ್ಯಾಚರಣೆಗೊಳಿಸಲು ಯೋಜಿಸಿದ್ದು, ಇಂದು 25 ಬಸ್ ಗಳನ್ನು ರಸ್ತೆಗೆ ಇಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಇಷ್ಟು ಎಲೆಕ್ಟ್ರಿಕ್ ಬಸ್ ರಸ್ತೆಗೆ ಇಳಿಯಲಿವೆ.
ಇವಿ ಪವರ್ ಪ್ಲಸ್ ಬಸ್ ಗಳು ಬಸ್ ಗಳು 12 ಮೀಟರ್ ಉದ್ದವಾಗಿದ್ದು, ಪ್ರತಿ ಚಾರ್ಜ್ ಗೆ 300 ಕಿ.ಮೀ ಕ್ರಮಿಸುತ್ತದೆ. ಸುಧಾರಿತ Li-ion phosphate Battery ಹೊಂದಿದೆ. ಇದು 203 ಗಂಟೆಗಳಲ್ಲಿ ಫಾಸ್ಟ್ ಚಾರ್ಚಿಂಗ್ ಮೂಲಕ ಸಂಪೂರ್ಣವಾಗಿ ರೀಚಾರ್ಜ್ ಮಾಡಬಹುದು. ಚಾಲಕರು, ನಿರ್ವಾಹಕರು ಸೇರಿದಂತೆ 45 ಆಸನಗಳನ್ನು ಹೊಂದಿದೆ. ಬಸ್ ನಲ್ಲಿ ಸಿಸಿ ಕ್ಯಾಮೆರಾಗಳು, ಅಗ್ನಿಶಾಮಕ ಸಾಧನ, ಎಮರ್ಜೆನ್ಸಿ ಬಟನ್, ಪ್ರಥಮ ಚಿಕಿತ್ಸಾ ಕಿಟ್, ಗ್ಲಾಸ್ ಹ್ಯಾಮರ್ ಮತ್ತಿತರ ಸುರಕ್ಷಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಹಂತ-ಹಂತವಾಗಿ 350 ವಿದ್ಯುತ್ ವಾಹನಗಳನ್ನು ನಿಗಮದಿಂದ ಸೇರ್ಪಡೆಗೊಳಿಸುವ ಯೋಜನೆಯಿದೆ. ಗ್ರಾಮಾಂತರ ಪ್ರದೇಶದ ಪ್ರಯಾಣಿಕರಿಗೂ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಸದುದ್ದೇಶದಿಂದ 600 ಹೊಸ ಕರ್ನಾಟಕ ಸಾರಿಗೆ ಮಾದರಿಯ ವಾಹನಗಳು ಮೂರು ತಿಂಗಳ ಅವಧಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ.