ಬೆಂಗಳೂರು: ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ (ಎಚ್ಎಸ್ಆರ್ಪಿ) ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನೀಡಿದ್ದ ಗಡುವು ಸೆ.15 ಮುಕ್ತಾಯವಾಗುತ್ತಿದೆ. ನಂಬರ್ ಪ್ಲೇಟ್ ಅಳವಡಿಸದ ವಾಹನಗಳ ವಿರುದ್ಧ ದಂಡ ವಿಧಿಸುವ ನಿರ್ಧಾರವನ್ನು ಸಾರಿಗೆ ಇಲಾಖೆ ಇದುವರೆಗೆ ಕೈಗೊಂಡಿಲ್ಲ.
ಹೈಕೋರ್ಟ್ನಲ್ಲಿ ಸೆಪ್ಟೆಂಬರ್ 18 ರಂದು ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ದಂಡ ವಿಧಿಸದಿರಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಎಚ್ಎಸ್ಆರ್ಪಿ ಅಳವಡಿಕೆಯ ಮೂರು ತಿಂಗಳ ಅವಧಿ ಈಗ ಮುಗಿದಿದೆ. ಸೆಪ್ಟೆಂಬರ್ 18ಕ್ಕೆ ಹೈಕೋರ್ಟ್ ನೀಡುವ ಆದೇಶ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಬಲವಂತದ ಕ್ರಮ ಇರುವುದಿಲ್ಲ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ರಾಜ್ಯದ 1.70 ಕೋಟಿ ಹಳೇ ವಾಹನಗಳ ಪೈಕಿ ಈವರೆಗೆ 50 ಲಕ್ಷ ವಾಹನಗಳಿಗಷ್ಟೇ ಅಳವಡಿಸಿಕೊಂಡಿರುವುದರಿಂದ ಗಡುವು ವಿಸ್ತರಣೆ ಅನಿವಾರ್ಯವಾಗಿದೆ. 2019ರ ಏ.1ಕ್ಕಿಂತ ಮೊದಲು ನೋಂದಣಿಯಾಗಿರುವ ಹಳೇ ವಾಹನಗಳಿಗೆ ಈ ನಿಯಮ ಕಡ್ಡಾಯವಾಗಿದೆ. ನಂಬರ್ ಪ್ಲೇಟ್ ಜೋಡಣೆ ಪ್ರಕ್ರಿಯೆಯನ್ನು ವಾಹನ ಉತ್ಪಾದಕ ಕಂಪನಿಗಳ ಅಧಿಕೃತ ಡೀಲರ್ಗಳಿಗೆ ಟೆಂಡರ್ ಮುಖೇನ ಕೊಡಲಾಗಿದೆ. ರಾಜ್ಯದಲ್ಲಿ ನಂಬರ್ ಪ್ಲೇಟ್ ಪೂರೈಕೆ ಜವಾಬ್ದಾರಿಯನ್ನು ಏಳೆಂಟು ಕಂಪನಿಗಳಿಗೆ ಕೊಡಲಾಗಿದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಅಂದಾಜು 4000ಕ್ಕೂ ಅಧಿಕ ಡೀಲರ್ ಪಾಯಿಂಟ್ಗಳನ್ನು ಗುರುತಿಸಲಾಗಿದೆ.
ಮತ್ತೆ ಅವಕಾಶ ಸಾಧ್ಯತೆ: 2023ರ ಆ.18ರಂದು ಅಧಿಸೂಚನೆ ಹೊರಡಿಸಿದ್ದ ಸರ್ಕಾರ, ಎಚ್ಎಸ್ಆರ್ಪಿ ಹಾಕಿಸಲು 2023ರ ನ.17ರ ಗಡುವು ವಿಧಿಸಿತ್ತು. ಮಾಲೀಕರ ನಿರಾಸಕ್ತಿ ಹಿನ್ನೆಲೆ 2024ರ ಫೆ.17ರವರೆಗೆ ಮತ್ತೆ ಮೇ 31ರವರೆಗೆ, ಪುನಃ ಸೆ.15ರವರೆಗೆ ಅವಕಾಶ ನೀಡಲಾಗಿತ್ತು.
ಅರ್ಜಿ ಸಲ್ಲಿಸುವುದು ಹೇಗೆ?: ವೆಬ್ಸೈಟ್ Transport.karnataka.gov.in ಅಥವಾ www.siam.inಗೆ ಭೇಟಿ ಕೊಟ್ಟು ಬುಕ್ ಎಚ್ಎಸ್ಆರ್ಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಬೇಕು. ನಂಬರ್ ಪ್ಲೇಟ್ ಅಳವಡಿಕೆಗೆ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು.