ಬೆಂಗಳೂರು: ರೈತರ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡಲಾಗುವುದು. ಫೆಬ್ರವರಿ 25 ಕೊನೆಯ ದಿನವಾಗಿದೆ. ಈ ದಿನವನ್ನು ಮತ್ತೆ ವಿಸ್ತರಿಸುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಈ ಹಿಂದೆ ಸಾಲ ಮನ್ನಾ ಮಾಡಿದ 388 ರೂ. ವಿಲೇವಾರಿ ಇನ್ನೂ ಬಾಕಿ ಇದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮತ್ತಿತರ ತಾಂತ್ರಿಕ ಕಾರಣಗಳಿಗೆ ಈ ಬಾಕಿ ಉಳಿದಿದೆ. ಸಾಲ ಮನ್ನಾ ಮಾಡುವುದಿಲ್ಲ. ಆದರೆ ನಾವು ಅಲ್ಪಾವಧಿ, ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದೇವೆ ಎಂದು ಹೇಳಿದರು.
ಬಡ್ಡಿ ಮನ್ನಾಕ್ಕೆ 540 ಕೋಟಿ ರೂ.ಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಹಿಂದೆ ಇದೇ ರೀತಿ ಬಡ್ಡಿ ಮನ್ನಾ ಮಾಡಿದಾಗ 140 ಕೋಟಿ ರೂ. ಅಷ್ಟೆ ಹೊರೆ ಬಿದ್ದಿತ್ತು. ಎಲ್ಲ ರೈತರು ಸಾಲ ಮರುಪಾವತಿಸಿದರೆ 540 ಕೋಟಿ ರೂ. ಬೇಕಾಗುತ್ತದೆ. ಆದರೆ ಶೇ.50 ರಷ್ಟು ರೈತರು ಮಾತ್ರ ಸಾಲ ಮರುಪಾವತಿಸುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರಕ್ಕೆ 200 ಕೋಟಿ ರೂ. ಹೊರೆಯಾಗಬಹುದಾದ ಲೆಕ್ಕ ಹಾಕಲಾಗಿದೆ ಎಂದು ತಿಳಿಸಿದರು.
ಹೊಸ ಸಾಲ: ನಾವು ರೈತರಿಗೆ ಹೊಸ ಸಾಲ ಕೊಡುತ್ತಿದ್ದೇವೆ. ಶೇ.99 ರೈತರು ಸಾಲ ಕಟ್ಟುತ್ತಿದ್ದಾರೆ. ಸಾಲ ಪಡೆದು ಸತ್ತು ಹೋದಲ್ಲಿ ಮಾತ್ರ ದಾಖಲೆ ಕಾರಣಕ್ಕೆ ಬಾಕಿ ಉಳಿಯುತ್ತಿವೆ ಎಂದು ಕೆ.ಎನ್.ರಾಜಣ್ಣ ಹೇಳಿದರು.



