ಶಿವಮೊಗ್ಗ: ನಾನು ಓದುವುದರಲ್ಲಿ ಅಷ್ಟು ಬುದ್ದಿವಂತನಾಗಿರಲಿಲ್ಲ. ನಾನು ಸಹ ಫೇಲ್ ಆಗಿದ್ದೇನೆ. ನನಗೆ ಕನ್ನಡ ಅಷ್ಟು ಶುದ್ಧವಾಗಿ ಓದಲು ಬರಲ್ಲ. ಸ್ವಲ್ಪ ಉಚ್ಚಾರಣೆ ತಪ್ಪಾಗುತ್ತೆ. ನನ್ನ ಬಗ್ಗೆ ಕೆಟ್ಟ ಟ್ರೋಲ್ ಮಾಡುವವರು ಉದ್ಧಾರಾಗಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
2023-2024ನೇ ಸಾಲಿನ ಎಸ್ಎಸ್ಎಲ್ಸಿ (SSLC) ಪರೀಕ್ಷೆ ಫಲಿತಾಂಶ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಶಿಕ್ಷಣದ ಬಗ್ಗೆ ಚುನಾವಣೆ ಸಮಯದಲ್ಲಿ ಚೆರ್ಚೆ ನಡೆಯಿತು. ನಾನೂ ಸಹ ಫೇಲ್ ಆಗಿದ್ದೇನೆ. ಶಿಕ್ಷಕರ ಸಹಕಾರ, ಪೋಷಕರ ಸಹಕಾರದಿಂದ ನಿಮ್ಮ ಮುಂದೆ ಬಂದಿದ್ದೇನೆ ಎಂದರು.
ಬಾಗಲಕೋಟೆ ಜಿಲ್ಲೆಯ ಮಳ್ಳಿಗೇರಿ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರ 625ಕ್ಕೆ 625 ಅಂಕ ಪಡೆದ ಸಾಧನೆ ಮಾಡಿದ್ದಾರೆ. ಇಲಾಖೆ ವತಿಯಿಂದ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರಿಗೆ ಧನ್ಯವಾದ ತಿಳಿಸುತ್ತೇನೆ. ಇಲಾಖೆಯಲ್ಲಿ ಅನೇಕ ಬದಲಾವಣೆ ಮಾಡಿದ್ದೇವೆ. ಪಠ್ಯ ಪುಸ್ತಕ ಬದಲಾವಣೆ, ಶಿಕ್ಷಕರ ನೇಮಕ ಹೀಗೆ ಅನೇಕ ಬದಲಾವಣೆ ತಂದಿದ್ದೇವೆ. ಅನುದಾನಿತ ಶಾಲೆಗಳಿಗೂ ಶಿಕ್ಷಕರ ನೇಮಕ ಮಾಡುತ್ತೇವೆ ಎಂದು ತಿಳಿಸಿದರು.
ಈ ವರ್ಷ ಮಾತ್ರ ಕೃಪಾಂಕ: ಕೊರೊನಾ ಸಮಯದ ವಿದ್ಯಾರ್ಥಿಗಳು ಈಗ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಶೇ 20 ರಷ್ಟು ಕೃಪಾಂಕ ಅಂಕ ಕೊಟ್ಟಿದ್ದೇವೆ. ಈ ವರ್ಷಕ್ಕೆ ಮಾತ್ರ ಕೃಪಾಂಕ ಅಂಕ ಸೀಮಿತವಾಗಿರುತ್ತದೆ. ನಮ್ಮ ಶಿಕ್ಷಣ ಇಲಾಖೆ ಈಗಾಗಲೇ ತರಗತಿ ಪ್ರಾರಂಭಕ್ಕೆ ಸಿದ್ದತೆ ಮಾಡಿಕೊಂಡಿದೆ. ಜಸ್ಟ್ ಪಾಸ್ ಆದ ಮಕ್ಕಳು ಮತ್ತೆ ಪರೀಕ್ಷೆ ಬರೆದು ಅಂಕ ಹೆಚ್ಚಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಸ್ಪೇಷಲ್ ಕ್ಲಾಸ್ ತೆಗೆದುಕೊಳ್ಳುತ್ತೇವೆ. ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರು ಇದ್ದಾರೆ. 3 ಸಾವಿರ ಕೆಪಿಎಸ್ಸಿ ಶಾಲೆಗಳನ್ನು ಪ್ರಾರಂಭಿಸುತ್ತೇವೆ. ಎಸ್ಇಪಿ ಜಾರಿಗೆ ನಾವು ತಯಾರಾಗಿದ್ದೇವೆ ಎಂದು ಹೇಳಿದರು.
ಇಲಾಖೆಯಲ್ಲಿ ತುಂಬಾ ನ್ಯೂನತೆ ಇದೆ. ನಾವು ಎಲ್ಲವನ್ನೂ ಸಹ ಸರಿ ಮಾಡಿಕೊಳ್ಳುತ್ತೇವೆ. ಸರ್ಕಾರಿ ಶಾಲೆಯ ಶಿಕ್ಷಕರ ಪ್ರತಿಭೆಯನ್ನು ನಾವು ಬಳಸಿಕೊಳ್ಳಬೇಕಿದೆ. ಇಂದಿನ ಸರ್ಕಾರದ ಶಿಕ್ಷಣ ಇಲಾಖೆ 500 ಕೋಟಿ ಸಾಲ ನಾವು ತೀರಿಸುತ್ತಿದ್ದೇವೆ. ಖಾಸಗಿ ಶಾಲೆಗಳಲ್ಲಿ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.