ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್…., 7ನೇ ವೇತನ ಆಯೋಗ ಜಾರಿ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಎದುರಾಗಿದೆ. 7ನೇ ವೇತನ ಆಯೋಗದ ವರದಿ ಸಲ್ಲಿಕೆ ಅವಧಿ ವಿಸ್ತರಿಸುವ ಸಾಧ್ಯತೆ ಇದ್ದು, ಸದ್ಯಕ್ಕೆ ವೇತನ ಪರಿಷ್ಕರಣೆ ನಡೆಯಲ್ಲ. ಈ ಬಗ್ಗೆ ಅರ್ಥಿಕ ಇಲಾಖೆ ಸರ್ಕಾರಕ್ಕೆ ಮತ್ತೆ ಆರು ತಿಂಗಳು ಅವಧಿ ವಿಸ್ತರಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ಅಧ್ಯಕ್ಷತೆಯ 7ನೇ ರಾಜ್ಯವೇತನ ಆಯೋಗದ ಅವಧಿಯನ್ನು ಮತ್ತೆ 6 ತಿಂಗಳ ಕಾಲ ವಿಸ್ತರಿಸಲು, ಆರ್ಥಿಕ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಹೀಗಾಗಿ ಸದ್ಯಕ್ಕೆ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ, ಸೌಲಭ್ಯಗಳ ಪರಿಷ್ಕರಣೆ ಅನುಮಾನವೆನ್ನಲಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರ ನ.19 , 2022 ರಂದು ನಿವೃತ್ತ ಮುಖ್ಯಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತ್ತು. 6 ತಿಂಗಳಲ್ಲಿ ವರದಿ ಸಲ್ಲಿಸಲು ಸೂವಿಸಲಾಗಿತ್ತು. ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಅವಧಿಯನ್ನು ಮತ್ತೆ 6 ತಂಗಳು ವಿಸ್ತರಿಸಿತ್ತು. ಇದೀಗ ನವೆಂಬರ್ 18ಕ್ಕೆ ಅವಧಿ ಮುಕ್ತಾಯವಾಗಲಿದೆ. ಆದರೆ, ವೇತನ ಪರಿಷ್ಕರಣೆಗೆ ವರ್ಷಕ್ಕೆ 12 ರಿಂದ 18 ಸಾವಿರ ಕೋಟಿ ಬೇಕು. ಸರ್ಕಾರದ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವುದು ಸವಾಲಿನ ಕೆಲಸವಾಗಿದೆ. ಇದರ ಜತೆ ವೇತನ ಪರಿಷ್ಕರಣೆ ಇನ್ನಷ್ಟು ಹೊರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮತ್ತೆ ಅವಧಿಯನ್ನು 6 ತಿಂಗಳು ವಿಸ್ತರಿಸಲು ಚಿಂತನೆ ನಡೆದಿದೆ.
ಈಗಲೇ ವರದಿ ಸಲ್ಲಿಕೆಯಾದರೆ ನೌಕರರ ವೇತನ, ಭತ್ಯೆ ಪರಿಷ್ಕರಣೆಗೆ ಒತ್ತಡ ಬೀಳಲಿದೆ. ಈಗಾಗಲೇ ಮಧ್ಯಂತರ ಪರಿಹಾರವಾಗಿ ಶೇ.17ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಅಂತಿಮ ಪರಿಷ್ಕರಣೆ ಮಾಡಿದಲ್ಲಿ ಹೆಚ್ಚಿನ ಹೊರೆಯಾಗುವುದಿಲ್ಲ ಹೀಗಾಗಿ ನೌಕರರು ವೇತನ ಆಯೋಗದ ವರದಿ ಎದುರು ನೋಡುತ್ತಿದ್ದಾರೆ.



