ದಾವಣಗೆರೆ: ಜಿಲ್ಲೆಯಾದ್ಯಂತ ಇಡೀ ರಾತ್ರಿ ಮಹಾ ಮಳೆ ಸುರಿದಿದ್ದು, ಈ ಮಳೆ ಅಬ್ಬರಕ್ಕೆ ತೀವ್ರ ಹಾನಿ ಉಂಟಾಗಿದೆ. ಹರಿಹರ ಪಟ್ಟಣದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಹರಿಹರದ ಕಾಳಿದಾಸ ನಗರದಲ್ಲಿ ಮಳೆಯ ನೀರು 40ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ. ಮನೆ ಒಳಗೆ ಎರಡ್ಮೂರು ಅಡಿಯಷ್ಟು ನೀರು ನಿಂತಿ ಪರಿಣಾಮ ಜನರು ರಾತ್ರಿಯಿಡೀ ಪರದಾಟ ನಡೆಸುವಂತಾಗಿತ್ತು. ಇನ್ನು ತುಂಗಾಭದ್ರಾ ನದಿ ಉಕ್ಕಿ ಹರಿಯುತ್ತಿದ್ದು ಹರಿಹರ ಮತ್ತು ಹರಪನಹಳ್ಳಿ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ನೀರಿನಲ್ಲಿ ಮುಳುಗಿದೆ. ಇದರಿಂದ ಹರಿಹರ ಮತ್ತು ಹರಪನಹಳ್ಳಿ ನಡುವಿನ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ.
ಬುಧವಾರ ರಾತ್ರಿಯಿಂದ ಸತತವಾಗಿ ಎಂಟು ಗಂಟೆಗಳ ಕಾಲ ಬಂದ ಮಳೆಯ ಪರಿಣಾಮ ಅನೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಮನೆಗಳಿಗೆ ಮಳೆಯ ನೀರು ತುಂಬಿದ್ದರಿಂದ ಜನರು ಸಾಕಷ್ಟು ಸಮಸ್ಯೆ ನುಭವಿಸುವಂತಾಯಿತು. ಇಂದು ಬೆಳಗ್ಗೆಯೂ ಸಹ ಮಳೆ ಮುಂದುವರಿದಿದ್ದು, ಜನರ ಸಂಕಷ್ಟ ಸಿಲುಕಿದ್ದಾರೆ.
ದಾವಣಗೆರೆ ನಗರದಲ್ಲಿ ಚರಂಡಿಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಕ್ಕೆ ನೀರು ನುಗ್ಗಿತ್ತು. ಈರುಳ್ಳಿ ಮಾರುಕಟ್ಟೆ, ಭಾರತ್ ಕಾಲೊನಿ ಸೇರಿ ಹಲವೆಡೆ ನೀರು ನುಗ್ಗಿದೆ. ಹಳೆ ಕುಂದುವಾಡ ರಸ್ತೆ ಸಹ ಮಳೆಯ ನೀರಿನಿಂದ ಮುಳುಗಿದ ಪರಿಣಾಮ ಸಂಪರ್ಕ ಕಡಿತವಾಗಿತ್ತು.
ಮಳೆಯಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟಲು ಹಾಗೂ ತುರ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ನಿರ್ದೇಶನ ನೀಡಿದ್ದಾರೆ.
ವಾಯುಭಾರ ಕುಸಿತದಿಂದ ರಾಜ್ಯದೆಲ್ಲೆಡೆ ಮಳೆಯಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಕೂಡ ಎಡೆಬಿಡದೆ ಮಳೆಯಾಗುತ್ತಿದೆ. ನದಿ ಪಾತ್ರದಲ್ಲಿರುವ ಜನರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕು.ಮಳೆಯಿಂದ ಮನೆ ಕುಸಿದು ಸಂಕಷ್ಟದಲ್ಲಿರುವ ಜನರ ರಕ್ಷಣೆ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದ್ದಾರೆ.