ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವಿವಿಧ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ, ಇದೀಗ ಆದೇಶ ತೆರವುಗೊಳಿಸಿದೆ.
ಭಕ್ತರ ಮನವಿ ಮೇರೆಗೆ ನಿರ್ದಿಷ್ಟ ಷರತ್ತಿಗೆ ಒಳಪಟ್ಟು ದೈನಂದಿನ ಪೂಜಾ ಕಾರ್ಯಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಧಾರ್ಮಿಕ ಉತ್ಸವಗಳಿಗೆ ಮಾತ್ರ ನಿರ್ಬಂಧ ಮುಂದುವರೆದಿತ್ತು.ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿರುವ ಕಾರಣ ಆರೋಗ್ಯ ಇಲಾಖೆಯ ಅಭಿಪ್ರಾಯವನ್ನು ಪಡೆದು ಧಾರ್ಮಿಕ ಉತ್ಸವಗಳಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ರಾಜ್ಯ ಸರ್ಕಾರ ತೆರವುಗೊಳಿಸಿದೆ.
ಧಾರ್ಮಿಕ ದತ್ತಿ ಇಲಾಖೆ ಮಂಗಳವಾರದಂದು ಈ ಕುರಿತು ಸುತ್ತೋಲೆ ಹೊರಡಿಸಿದ್ದು ತಕ್ಷಣದಿಂದಲೇ ಜಾರಿಗೆ ಬರಲಿದೆ.ಇದರಿಂದ ಧಾರ್ಮಿಕ ಸೇವೆ, ಜಾತ್ರಾ ಮಹೋತ್ಸವ, ಬ್ರಹ್ಮ ರಥೋತ್ಸವ, ಅನ್ನ ದಾಸೋಹ ಪ್ರಸಾದ ವಿತರಣೆ, ಪವಿತ್ರೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಗಳನ್ನು ಮೊದಲಿನಂತೆ ನೆರವೇರಿಸಬಹುದಾಗಿದೆ.