ಚಿಕ್ಕಬಳ್ಳಾಪುರ: ಟೊಮ್ಯಾಟೊ ದರ ಒಂದು ರೀತಿ ಲಾಟ್ರಿ ಟಿಕೆಟ್ ಇದ್ಹಾಂಗೆ..! ಹೊಡದ್ರೆ ಜಾಕ್ ಪಾಟ್..! ಬಿದ್ದರೆ ಒಂದು ರೂಪಾಯಿಗೂ ಕೇಳೋರು ಇರಲ್ಲ. ಇದೀಗ ಟೊಮ್ಯಾಟೊಗೆ ಭಾರೀ ಬೇಡಿಕೆ ಬಂದಿದೆ. ಇಂತಹ ದುಬಾರಿ ಟೊಮ್ಯಾಟೊ ಎರಡು ಜೀವ ಬಲಿ ಪಡೆದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಟೊಮ್ಯಾಟೊ ದುಬಾರಿ ಆಗಿದ್ದರಿಂದ ತೋಟಕ್ಕೆ ರೈತ ಅಳವಡಿಸಿದ್ದ ವಿದ್ಯುತ್ ಬೇಲಿಗೆ ಯುವಕನೊಬ್ಬ ಬಲಿಯಾಗಿದ್ದಾನೆ. ಸಿಟ್ಟಿಗೆದ್ದ ಮೃತನ ಕುಟುಂಬಸ್ಥರು ತೋಟದ ಮಾಲೀಕನಿಗೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಇದರಿಂದರಿಂದ ಹೊಲದ ಮಾಲೀಕನೂ ಸಾವನ್ನಪ್ಪಿದ ಘಟನೆ ಗೌರಿಬಿದನೂರು ತಾಲೂಕಿನ ಚಿರಕಮಟ್ಟೇನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಚಿರಕಮಟ್ಟೇನಹಳ್ಳಿ ಗ್ರಾಮದಲ್ಲಿ ಚಿಕ್ಕಹುಸೇನಪುರ ಗ್ರಾಮದ ರೈತ ಅಶ್ವತ್ಥರಾವ್ ಟೊಮ್ಯಾಟೊ ಬೆಳೆದಿದ್ದಾರೆ. ಟೊಮ್ಯಾಟೊ ದರ ಹೆಚ್ಚಾಗಿದ್ದರಿಂದ ಬೆಳೆ ರಕ್ಷಣೆಗೆಂದು ವಿದ್ಯುತ್ ಬೇಲಿ ಅಳವಡಿಸಿಕೊಂಡಿದ್ದರು. ಅದೇ ಗ್ರಾಮದ ಯುವ ರೈತ ವಸಂತರಾವ್(29) ಎಂಬುವರು ವಿದ್ಯುತ್ ಬೇಲಿಯ ಅರಿವಿಲ್ಲದೆ ಆಕಸ್ಮಿಕವಾಗಿ ಟೊಮ್ಯಾಟೊ ತೋಟಕ್ಕೆ ಹೋಗಿದ್ದು, ಈ ವೇಳೆ ವಿದ್ಯುತ್ ಪ್ರವಹಿಸಿ ಆತ ಸ್ಥಳದಲ್ಲೇ ಮೃತಪಟ್ಟಿದ್ಧಾನೆ.
ವಸಂತರಾವ್ನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮೃತನ ಕುಟುಂಬಸ್ಥರು ಮತ್ತು ಸಂಬಂಧಿಕರು ರೊಚ್ಚಿಗೆದ್ದು ಇಂದು ಬೆಳಗ್ಗೆ ತೋಟದ ಮಾಲೀಕ ಅಶ್ವತ್ಥರಾವ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಅಶ್ವತ್ಥರಾವ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾವಾಗಿದೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.



