ಬೆಳಗಾವಿ: ರೈತನೋರ್ವನಿಗೆ ಸಾಯುವ ಮಾತನಾಡಿ ಭಾರೀ ಸುದ್ದಿಯಾದ ಸಚಿವ ಉಮೇಶ್ ಕತ್ತಿಗೆ ವಿಪಕ್ಷಗಳು, ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಇದೀಗ ಕ್ಷಮೆ ಕೇಳಿದ್ದಾರೆ.
ನಾನು ಆ ಕ್ಷಣದಲ್ಲಿ ಮಾತನಾಡಿದ್ದು ತಪ್ಪಾಗಿರಬಹುದು, ನಾನು ಅದನ್ನು ಅಲ್ಲಗಳೆಯುತ್ತಿಲ್ಲ. ಸಾಯಬೇಕಾ ಎಂದು ಕೇಳಿದಾಗ ನಾನು ಮತ್ತೇನು ಹೇಳಲು ಸಾಧ್ಯ. ಸಾಯಿ ಅಂದೆ. ಆದರೆ ಆಗ ನಾನು ಹಾಗೆ ಹೇಳಿದ್ದು ತಪ್ಪಾಗಿದೆ ಎಂದು ನನಗೂ ಅನ್ನಿಸಿದೆ. ನಾನು ಒಬ್ಬ ಹಿರಿಯ ಶಾಸಕ, ಸಚಿವ ಸ್ಥಾನದಲ್ಲಿದ್ದೇನೆ. ಜನರಿಗೆ ತೊಂದರೆ ಆಗುತ್ತಿದೆ ಎಂಬುದು ನನಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ಕಾಲ ಕಾಲಕ್ಕೆ ಸಭೆ ನಡೆಸಿ, ಕೆಲಸ ಮಾಡುತ್ತೇನೆ ಎಂದಿದ್ದಾರೆ.
ನಾನು ಹೇಳಬಾರದಿತ್ತು, ಆದರೂ ಹೇಳಿಬಿಟ್ಟಿದ್ದೇನೆ. ಈಗ ಇದಕ್ಕಿಂತ ಇನ್ನೇನೂ ಮಾಡುವುದಕ್ಕೆ ಆಗುವುದಿಲ್ಲ. ‘ಸಾರಿ, ನನ್ನ ಮನಸ್ಸಿನಲ್ಲಿ ಈ ರೀತಿ ಬರಬಾರದಿತ್ತು. ಜನರು ಇದರ ಬಗ್ಗೆ ತಪ್ಪು ತಿಳಿದುಕೊಳ್ಳಬಾರದು. ಏನೇ ಇದ್ದರು ನಾನು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ತಿಳಿಸಿದರು.
ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಂಘದ ಕಾರ್ಯಕರ್ತ ಈಶ್ವರ್ ಪಡಿತರ ಅಕ್ಕಿ ಕಡಿತಗೊಳಿಸಿರೋದನ್ನು ಪ್ರಶ್ನಿಸಿದರು. ಈ ವೇಳೆ ಉತ್ತರ ಕರ್ನಾಟಕದಲ್ಲಿ ಅಕ್ಕಿ ಜತೆಗೆ ಜೋಳ ಕೊಡುತ್ತೇವೆ. ಲಾಕ್ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಸಚಿವರು ಹೇಳಿದ್ದರು.
ಲಾಕ್ಡೌನ್ ಇದೆ, ಅಲ್ಲಿಯವರೆಗೆ ಉಪವಾಸ ಸಾಯಬೇಕಾ..? ಎಂದು ಈಶ್ವರ್ ಪ್ರಶ್ನಿಸಿದಕ್ಕೆ ಸಾಯೋದು ಒಳ್ಳೆಯದು. ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಅಹಂಕಾರದ ಮಾತನಾಡಿದ ಆಡಿಯೋ ವೈರಲ್ ಆಗಿತ್ತು.



